ವಿಜಯೋತ್ಸವಕ್ಕೆ ಖಡ್ಗ ಹಿಡಿದುಕೊಂಡು ಬಂದ ಬಿಜೆಪಿ ಕಾರ್ಯಕರ್ತ; ವಿಡಿಯೋ ವೈರಲ್..
ವಿಜಯಪುರ;ವಿಜಯಪುರ ಕ್ಷೇತ್ರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆಲುವಿನ ವಿಜಯೋತ್ಸವದ ವೇಳೆ ಬಿಜೆಪಿ ಕಾರ್ಯಕರ್ತನೋರ್ವ ಸಾರ್ವಜನಿಕವಾಗಿ ಖಡ್ಗ ಪ್ರದರ್ಶನ ಮಾಡಿಕೊಂಡು ಹೋಗಿ ಭಯ ಹುಟ್ಟಿಸಿದ ಘಟನೆ ನಡೆದಿದೆ.
ಬಿಜೆಪಿ ಕಾರ್ಯಕರ್ತ ಖಡ್ಗ ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುವ ವಿಡಿಯೋ ಬಾರೀ ವೈರಲ್ ಆಗಿದೆ. ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನದ ಬಳಿಯ ರಸ್ತೆಯಲ್ಲಿ ಮೆರವಣಿಗೆಯ ವೇಳೆ ಸೆರಡಹಿಡಿದ ವಿಡಿಯೋ ಇದು ಎನ್ನಲಾಗಿದೆ.
ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಮೀದ್ ಮುಶ್ರಿಪ್ ವಿರುದ್ಧ ಜಯಗಳಿಸಿದ್ದರು.
ಮುಸ್ಲಿಮರೇ ಪ್ರಬಲವಾಗಿರುವ ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕೂಡ ಕೊನೆಯ ವೇಳೆ ಸ್ಪರ್ಧೆಯಿಂದ ಹಿಂದೆ ಸರಿದು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದರು.ಆದರೆ ಜಿದ್ದಾ ಜಿದ್ದಿನ ಕದನದಲ್ಲಿ ಕೊನೆಗೆ 8000 ಕ್ಕೂ ಅಧಿಕ ಮತಗಳಿಂದ ಯತ್ನಾಳ್ ಗೆಲುವು ಕಂಡಿದ್ದಾರೆ
ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಅವರ ವಿರುದ್ಧ 8223 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ.ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಯತ್ನಾಳ್ ಅವರಿಗೆ 94,201 ಮತಗಳು ಲಭಿಸಿವೆ.ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಮುಶ್ರೀಫ್ ಅವರಿಗೆ 85,978 ಮತಗಳು ಲಭಿಸಿವೆ.
ಬಿಜೆಪಿ ಗೆಲುವು ಸಾಧಿಸುತ್ತಿದಂತೆ ವಿಜಯೋತ್ಸವ ನಡೆಯಿತು.
ಈ ವೇಳೆ ಕಾರ್ಯಕರ್ತ ಕೈಯಲ್ಲಿ ಖಡ್ಗ ಹಿಡಿದುಕೊಂಡು ಪ್ರದರ್ಶನ ಮಾಡಿದ್ದಾನೆ.ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.