ಬೆಂಗಳೂರು;ಎರಡು ವರ್ಷಗಳ ಹಿಂದೆ ಪತಿ ತೀರಿಕೊಂಡ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದಿದ್ದ ಮಹಿಳೆ ಗಂಡನ ಪುಣ್ಯತಿಥಿ ದಿನ ತನ್ನ ಮಗುವಿನೊಂದಿಗೆ ಸಕಲವಾರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಜಯಲಕ್ಷ್ಮಿ (35) ಹಾಗೂ ಪುತ್ರ ಹರಿಹರನ್ (7)ಮೃತರು ಎಂದು ಗುರುತಿಸಲಾಗಿದೆ.
ಬೆಂಗಳೂರು ಹೊರವಲಯ ಬನ್ನೇರುಘಟ್ಟ ಸಮೀಪದ ಸಕಲವಾರ ಕೆರೆಗೆ ಮಗುವನ್ನು ಸೊಂಟಕ್ಕೆ ಕಟ್ಟಕೊಂಡು ವಿಜಯಲಕ್ಷ್ಮಿ ಜಿಗಿದಿದ್ದಾರೆ.
ಇವರು ಸಿ.ಕೆ.ಪಾಳ್ಯದಲ್ಲಿ ವಾಸವಾಗಿದ್ದರು.ಕಳೆದ ಎರಡು ವರ್ಷಗಳಿಂದ ಗಂಡನಿಲ್ಲದೇ ಮಗುವಿನೊಂದಿಗೆ ವಾಸವಾಗಿದ್ದ ಮಹಿಳೆ ಮನನೊಂದು ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿದ್ದಾಳೆ.
ಇವರು ಆಂಧ್ರ ಪ್ರದೇಶ ಮೂಲದವರಾಗಿದ್ದು,ಕುಟುಂಬ ಸಮೇತವಾಗಿ ಕೆಲವು ವರ್ಷಗಳ ಹಿಂದೆ ದುಡಿಮೆಗಾಗಿ ಬೆಂಗಳೂರಿಗೆ ಬಂದಿದ್ದು,ಸಿ.ಕೆ. ಪಾಳ್ಯದಲ್ಲಿ ವಾಸವಿದ್ದರು. 2 ವರ್ಷದ ಹಿಂದೆ ನಡೆದ ಅಪಘಾತದಲ್ಲಿ ವಿಜಯಲಕ್ಷ್ಮೀ ಅವರ ಪತಿ ತೀರಿಕೊಂಡಿದ್ದರು.