ಚೆನ್ನೈ;ಖ್ಯಾತ ಗಾಯಕಿ ವಾಣಿ ಜಯರಾಂ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಉಂಟಾಗಿತ್ತು.ಈ ಕುರಿತು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಸಾವಿನ ಬಗ್ಗೆ ಅನುಮಾನದ ಹಿನ್ನೆಲೆ ವಾನಿ ಜಯರಾಂ ಅವರ ಪಾರ್ಥೀವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು.ಇದೀಗ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು ಸಾವಿನ ಬಗೆಗಿನ ಸಂಶಯಕ್ಕೆ ತೆರೆಬಿದ್ದಿದೆ.
ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯ ಪ್ರಕಾರ, ವಾಣಿ ಅವರು ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಆಕೆಯ ಸಾವಿನ ಸಮಯದಲ್ಲಿ ಗಾಯಕಿ ಒಬ್ಬಂಟಿಯಾಗಿದ್ದರು.ಮತ್ತು ಅವರ ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಪೊಲೀಸರು ಆಕೆಯ ಮನೆ ಬಳಿಯಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ. ಮನೆಯೊಳಗೆ ಯಾವುದೇ ಬಲವಂತದ ಪ್ರವೇಶದ ಯಾವುದೇ ಲಕ್ಷಣಗಳಿಲ್ಲ ಎಂದು ಅವರು ಹೇಳಿದರು.
ಇನ್ನೊಂದು ಕಡೆ ಅಕ್ಕ ಪಕ್ಕದ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಪರಿಶೀಲನೆ ಮಾಡಿದ್ದರು. ಅದರಲ್ಲೂ ಕೂಡ ಯಾರೂ ವಾಣಿ ಜಯರಾಂ ಅವರ ಮನೆಗೆ ಹೋಗಿದ್ದಾಗಲಿ ಅಥವಾ ಅವರ ಮನೆಯಿಂದ ಬಂದಿದ್ದಾಗಲಿ ಕಂಡು ಬಂದಿಲ್ಲ. ಹೀಗಾಗಿ ಗಾಯಕಿಯ ಸಾವನ್ನು ಸಹಜ ಸಾವು ಎಂಬ ತೀರ್ಮಾನಕ್ಕೆ ಪೊಲೀಸ್ ಅಧಿಕಾರಿಗಳು ಬಂದಿದ್ದಾರೆ.
ವಾಣಿ ಜಯರಾಂ ಅವರು ಮಲಗಿದ್ದ ಮಂಚದ ಪಕ್ಕದಲ್ಲಿ ಮರದ ಟೇಬಲ್ ಇತ್ತು.ಈ ಟೇಬಲ್ ಮೇಲೆ ವಾಣಿ ಜಯರಾಂ ಹೃದಯಾಘಾತದಿಂದ ಬಿದ್ದ ಪರಿಣಾಮ ತಲೆಗೆ ಬಲವಾದ ಏಟಾಗಿದೆ.ಕೂಡಲೇ ಅವರಿಗೆ ರಕ್ತಸ್ರಾವವಾಗಿದೆ. ಈ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.