ತಿರುಪತ್ತೂರ್:ತಮಿಳುನಾಡಿನ ವಾಣಿಯಂಬಾಡಿಯಲ್ಲಿ ಖಾಸಗಿ ಸಂಸ್ಥೆಯೊಂದು ತೈಪೂಯಂ ಹಬ್ಬದ ಆಚರಣೆಯ ಅಂಗವಾಗಿ ಉಚಿತ ಸೀರೆಗಳನ್ನು ವಿತರಿಸುತ್ತಿದ್ದ ವೇಳೆ ಕಾಲ್ತುಳಿತದಲ್ಲಿ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ.
ಸುಮಾರು 1,000 ಮಹಿಳೆಯರು ಸೀರೆಗಳನ್ನು ವಿತರಿಸುವ ಸ್ಥಳಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಾಲ್ತುಳಿತ ಸಂಭವಿಸಿ ಅನೇಕ ಮಹಿಳೆಯರು ಗಾಯಗೊಂಡಿದ್ದಾರೆ.ವಾಣಿಯಂಬಾಡಿ ತಾಲೂಕಿನ ಆಸ್ಪತ್ರೆಗೆ ಹಲವು ಮಹಿಳೆಯರನ್ನು ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ವಾಣಿಯಂಬಾಡಿಯ ಜಿನ್ನಾ ಸೇತುವೆ ಬಳಿ ಉಚಿತ ಸೀರೆ ಮತ್ತು ಧೋತಿಗಾಗಿ ಟೋಕನ್ ವಿತರಿಸುತ್ತಿದ್ದ ವೇಳೆ ನೂಕಾಟ ಉಂಟಾಗಿದೆ.
ವಲ್ಲಿಯಮ್ಮಾಳ್, ರಾಜತಿ, ನಾಗಮ್ಮಾಳ್, ಚಿನ್ನಮ್ಮಾಳ್ ಮೃತ ಮಹಿಳೆಯರು.
ನೂಕಾಟದ ವೇಳೆ ಮಧ್ಯದಲ್ಲಿ ಸಿಲುಕಿಕೊಂಡಿದ್ದ ಸುಮಾರು 15 ಮಹಿಳೆಯರಿಗೆ ಉಸಿರಾಟದ ತೊಂದರೆ ಉಂಟಾಗಿ ಸ್ಥಳದಲ್ಲೇ ಮೂರ್ಛೆ ಹೋಗಿದ್ದಾರೆ. ಅವರನ್ನು ಕೂಡಲೇ ಚಿಕಿತ್ಸೆಗೆಂದು ಸ್ಥಳೀಯ ವಾಣಿಯಂಬಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ.
ಟೋಕನ್ ವಿತರಣೆ ಮಾಡಿದ್ದ ಖಾಸಗಿ ಸಂಸ್ಥೆಯ ಮಾಲೀಕ ಅಯ್ಯಪ್ಪನ್ ಎನ್ನುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.