ಚಿಕ್ಕಮಗಳೂರು; ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಕಾರಣ ಇಬ್ಬರು ವಿದ್ಯಾರ್ಥಿನಿಯರು ವಿಷ ಸೇವಿಸಿದ್ದು, ಈ ಪೈಕಿ ಓರ್ವ ವಿದ್ಯಾರ್ಥಿನಿ ಮೃತಪಟ್ಟಿದ್ದು ಮತ್ತೊಬ್ಬಳ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಕಳಸ ಪಟ್ಟಣದ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಚಂದ್ರರಾಜಯ್ಯ ಅವರ ಪುತ್ರಿ ಸ್ಪರ್ಶ ಮೃತಳು. ಜೀವಶಾಸ್ತ್ರ ವಿಷಯದಲ್ಲಿ ಅನುತ್ತೀರ್ಣಳಾಗಿದ್ದ ಸ್ಪರ್ಶ ಮನನೊಂದು ಎ.21ರ ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು.
ತೀವ್ರ ಅಸ್ವಸ್ಥಳಾಗಿದ್ದ ಸ್ಪರ್ಶಳನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಸ್ಪಂದಿಸದ ಕಾರಣಕ್ಕೆ ಆಕೆಯನ್ನು ಮನೆಗೆ ವಾಪಸ್ ಕರೆತರಲಾಗಿತ್ತು. ಬೆಳಗ್ಗೆ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಇನ್ನೊಂದು ಘಟನೆಯಲ್ಲಿ ಜಾಂಬಳೆಯ ಸವಿತಾ ಎಂಬವರ ಪುತ್ರಿ ದಿಕ್ಷಿತಾ(18) ಎಂಬ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ.
ಕಳಸ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ದೀಕ್ಷಿತಾ 2 ವಿಷಯದಲ್ಲಿ ಅನುತ್ತೀರ್ಣಳಾಗಿದ್ದಳು.
ಗೆಳತಿ ಸ್ಪರ್ಶಾ ಸಾವಿನ ಸುದ್ದಿ ತಿಳಿದ ನಂತರ ದಿಕ್ಷಿತಾ ವಿಷ ಸೇವಿಸಿದ್ದು ಕಳಸದ ಖಾಸಗಿ ಆಸ್ಪತ್ರೆಗೆ ಆಕೆಯನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ.