ಶಿವಮೊಗ್ಗ: ಯುವತಿಯೋರ್ವಳ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರು ಕೇಸ್ ನ್ನು ಭೇದಿಸಿದ್ದಾರೆ.
ದಾವಣಗೆರೆ ಮೂಲದ ರಂಜಿತಾ(20)ಗೆ ಶಿವಮೊಗ್ಗದಿಂದ ಅಪಹರಣ ಮಾಡಿ 20 ಲಕ್ಷ ಹಣಕ್ಕಾಗಿ ಬೇಡಿಕೆ ಇಡಲಾಗಿದೆ ಎನ್ನಲಾಗಿತ್ತು.ಆದರೆ ಯುವತಿ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದು, ಯುವತಿಯ ಪ್ರಹಸನವೂ ಬಹಿರಂಗವಾಗಿದೆ.
ಜಯನಗರ ಪೊಲೀಸ್ ಠಾಣೆಯ ಪೊಲೀಸರು ಯುವತಿಯನ್ನು ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ.
ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಯುವತಿ ಕಾಣೆಯಾಗಿದ್ದಳು ಮತ್ತು ಆಕೆಯ ಪೋಷಕರ ಮೊಬೈಲ್ಗೆ ನಿಮ್ಮ ಮಗಳು ಸುರಕ್ಷಿತವಾಗಿ ಮನೆಗೆ ಬರಬೇಕಾದರೆ 20 ಲಕ್ಷ ರೂ. ನೀಡಬೇಕು. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ, ಹೆಣ ಸಹ ಸಿಗುವುದಿಲ್ಲ ಎಂದು ಮೆಸೇಜ್ ಮಾಡಿದ್ದರು.
ಇದರಿಂದ ಗಾಬರಿಗೊಂಡ ಪೋಷಕರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಯುವತಿಯು ಹುಬ್ಬಳ್ಳಿಯಲ್ಲಿರುವುದಾಗಿ ತಿಳಿದುಬಂದಿತ್ತು. ನಂತರ ಯುವತಿಯನ್ನು ಪೊಲೀಸರು ಹುಬ್ಬಳ್ಳಿಯ ಬಸ್ ನಿಲ್ದಾಣದಲ್ಲಿ ಪತ್ತೆ ಹಚ್ಚಿದ್ದಾರೆ.
ಯುವತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ,ಕ್ರೈಸ್ತ ಸನ್ಯಾಸಿನಿಯರ ಸೇವೆಯನ್ನು ಕಂಡು ನಾನು ಸಹ ಸನ್ಯಾನಿಯಾಗಬೇಕೆಂಬ ಆಸೆ ಹೊಂದಿದ್ದೆ. ಫಿಜಿಯೋಥರೆಪಿ ಓದುವಾಗ ಕೇರಳದ ಕ್ರಿಶ್ಚಿಯನ್ ಹುಡುಗಿಯರ ಪರಿಚಯ ಆಗಿತ್ತು. ಇದರಿಂದ ಕ್ರೈಸ್ತ ಸನ್ಯಾಸಿನಿಯಾಗಿ ಸಮಾಜ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಮುಂಬೈಗೆ ಹೊರಟಿದ್ದೆ ಎಂದು ವಿಚಾರಣೆಯಲ್ಲಿ ಪೊಲೀಸರಿಗೆ ತಿಳಿಸಿದ್ದಾಳೆ.
ಇದೀಗ ಯುವತಿಗೆ ಬುದ್ದಿವಾದ ಹೇಳಿ ಪೊಲೀಸರು ಪೋಷಕರ ಜೊತೆ ಕಳುಹಿಸಿಕೊಟ್ಟಿದ್ದಾರೆ.