ಹೊನ್ನಾಳಿ;ಹೊನ್ನಾಳಿಯಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಡಿಜಿ ಶಾಂತನಗೌಡ ಅವರ ಎದುರು ಹೀನಾಯವಾಗಿ ಸೋಲನ್ನು ಕಂಡಿದ್ದಾರೆ.
ಸೋಲಿನ ಹಿನ್ನೆಲೆಯಲ್ಲಿ ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಅವರ ಮನೆಗೆ ಆಗಮಿಸಿದ್ದ ಅಭಿಮಾನಿಗಳು ರೇಣುಕಾಚಾರ್ಯ ಅವರ ಎದುರು ಅಭಿಮಾನ ವ್ಯಕ್ತಪಡಿಸಿದ್ದಾರೆ.ಈ ವೇಳೆ ಶಾಸಕ ರೇಣುಕಾಚಾರ್ಯ ಕಣ್ಣೀರಿಟ್ಟಿದ್ದಾರೆ.
ಕ್ಷೇತ್ರದ ಜನರಿಗೆ ಸಾಕಷ್ಟು ಕೆಲಸ ಮಾಡಿ ಕೊಟ್ಟರು ಗೆಲ್ಲಲಿಲ್ಲ ಎಂದು ಸಾಕಷ್ಟು ಬೆಂಬಲಿಗರ ಮುಂದೆ ತಮ್ಮ ನೋವು ತಡೆಯಲಾಗದೆ ಕಣ್ಣೀರು ಹಾಕಿದ್ದಾರೆ.
ಮತ ಎಣಿಕೆಯಲ್ಲಿ ಒಂದು ಸುತ್ತಿನಲ್ಲೂ ರೇಣುಕಾಚಾರ್ಯ ಅವರು ಮುನ್ನಡೆ ಸಾಧಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳೊಂದಿಗೆ ಮಾತನಾಡಿದ ಅವರು, ನಾನು ಕ್ಷೇತ್ರದ ಜನರಿಗೆ ಹಗಲಿರುಳು ಕೆಲಸ ಮಾಡಿದೆ.ಆದರೂ ಈ ರೀತಿ ಸೋಲು ಆಗಿದೆ.ತಾಲೂಕಿನ ಎಲ್ಲಾ ನಾಯಕರು ನನ್ನ ಪರ ಕೆಲಸ ಮಾಡಿದ್ದರು. ನನಗೆ ಮತ ಕೊಟ್ಟವರಿಗೂ, ಕೊಡದವರಿಗೂ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಕೋವಿಡ್ನಲ್ಲಿ ಕೆಲಸ ಮಾಡಿದ್ದೆ, ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿದ್ದೆ. ಆದರೆ ಈಗ ಸೋತ ಬಳಿಕ ನಾನು ಯಾರ ಬಗ್ಗೆಯೂ ಆರೋಪ ಮಾಡಲ್ಲ, ನನ್ನ ಸೋಲಿಗೆ ನಾನೇ ಕಾರಣ ಎಂದು ಭಾವಿಸುತ್ತೇನೆ. ಮತದಾರರಿಗೆ ನನ್ನ ಮೇಲೆ ನಂಬಿಕೆ ಇರಲಿಲ್ಲ. ನಾನು ಗೆದ್ದರೂ ಧ್ವೇಷ ರಾಜಕಾರಣ ಮಾಡಿರಲಿಲ್ಲ ಎಂದು ರೇಣುಕಾಚಾರ್ಯ ನೋವು ತೋಡಿಕೊಂಡಿದ್ದಾರೆ.
ಇನ್ಮುಂದೆ ನಾನು ಚುನಾವಣಾ ರಾಜಕೀಯದಲ್ಲಿ ಮುಂದುವರೆಯುವುದಿಲ್ಲ, ಮುಂದಿನ ದಿನಗಳಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರ ಕೆಲಸ ಮಾಡುತ್ತೇನೆ ಎಂದು ಇದೇ ವೇಳೆ ರೇಣುಕಾಚಾರ್ಯ ಹೇಳಿದ್ದಾರೆ.