ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ; ಹೃದಯವಿದ್ರಾಹಕ ಘಟನೆ ವರದಿ
ತೆಲಂಗಾಣ:ಪತಿಯ ಕಿರುಕುಳ ಸಹಿಸಲಾರದೆ ಹತ್ತು ವರ್ಷದೊಳಗಿನ ತನ್ನ ಮೂವರು ಮಕ್ಕಳ ಜೊತೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ರಾಜಣ್ಣ ಸಿರಸಿಲ್ಲ ಜಿಲ್ಲೆಯ ಬೋಯಿನಪಲ್ಲಿ ತಾಲೂಕಿನ ಕೋಡುರುಪಾಕದಲ್ಲಿ ಘಟನೆ ನಡೆದಿದೆ.
ರಜಿತಾ(30) ಕಂಪ್ಯೂಟರ್ ಕೋರ್ಸ್ ಕಲಿಯಲು ಕರೀಂನಗರಕ್ಕೆ ಹೋಗುತ್ತಿದ್ದರು. ಅಲ್ಲಿ ಅವರಿಗೆ ಸುಭಾಷನಗರದ ಬಾಳೆಹಣ್ಣು ಮಾರಾಟಗಾರ ಮಹಮ್ಮದ್ ಅಲಿ ಪರಿಚಯವಾಗಿತ್ತು.ಬಳಿಕ ಸ್ನೇಹ ಪ್ರೀತಿಗೆ ತಿರುಗಿತ್ತು.
10 ವರ್ಷಗಳ ಹಿಂದೆ ರಜಿತಾ ಮನೆ ತೊರೆದು ಅಲಿಯನ್ನು ಮದುವೆಯಾಗಿದ್ದರು.ಅವರಿಗೆ 7 ಮತ್ತು 14 ತಿಂಗಳ ಇಬ್ಬರು ಪುತ್ರರು ಮತ್ತು 5 ವರ್ಷದ ಪುತ್ರಿ ಇದ್ದರು.
ಮದುವೆಯಾದ ಕೆಲ ದಿನಗಳ ನಂತರ ಅಲಿ ವರದಕ್ಷಿಣೆಗಾಗಿ ರಜಿತಾಗೆ ಕಿರುಕುಳ ನೀಡಲಾರಂಭಿಸಿದ್ದಾನೆ.ಈ ಬಗ್ಗೆ ರಜಿತಾ ವೇಮುಲವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ನಂತರ ಲೋಕ ಅದಾಲತ್ನಲ್ಲಿ ರಾಜಿ ಸಂಧಾನ ಮಾಡಲಾಗಿತ್ತು.
ಶುಕ್ರವಾರ ಕೋಡುರುಪಾಕ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮಿಡ್ ಮನೇರ್ ಜಲಾಶಯದಲ್ಲಿ ರಜಿತಾ ಹಾಗೂ ಮೂವರು ಮಕ್ಕಳ ಶವ ಪತ್ತೆಯಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವೇಮುಲವಾಡ ಪಟ್ಟಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು.ದಡದಲ್ಲಿ ಬ್ಯಾಗ್ನಲ್ಲಿ ಸಿಕ್ಕ ವಿಳಾಸ ಮತ್ತು ದೂರವಾಣಿ ಸಂಖ್ಯೆ ಆಧರಿಸಿ ರಜಿತಾ ಅವರ ಪತಿ ಅಲಿ ಮತ್ತು ಅವರ ಸಹೋದರನಿಗೆ ಮಾಹಿತಿ ನೀಡಲಾಗಿದೆ.
ಸ್ಥಳೀಯರ ಸಹಾಯದಿಂದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸಿರಸಿಲ್ಲಾ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ರಜಿತಾ ಅವರ ಕಿರಿಯ ಸಹೋದರ ರಂಜಿತ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಐ ಮಹೇಂದರ್ ಮಾಹಿತಿ ನೀಡಿದ್ದಾರೆ. ವರದಕ್ಷಿಣೆ ಕಿರುಕುಳದಿಂದ ರಜಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.