ಮಂಗಳೂರು;ಗನ್ ಮ್ಯಾನ್ ಭದ್ರತೆ ಹಿಂಪಡೆದ ಬಗ್ಗೆ ಕೊನೆಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ತಾಯಿ ಜೊತೆ ಪತ್ರಿಕಾಗೋಷ್ಟಿ ನಡೆಸಿದ ರಹೀಂ ಅವರು,11 ವರ್ಷಗಳಿಂದ ನನಗೆ ಇದ್ದ ಗನ್ ಮ್ಯಾನ್ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ.2012 ರಲ್ಲಿ 7 ಮಂದಿಯ ತಂಡ ಕಚೇರಿಗೆ ನುಗ್ಗಿ ಕೊಲೆಯತ್ನ ನಡೆಸಿತ್ತು. ಅದರಲ್ಲಿ ಇಬ್ಬರು ಆರೋಪಿಗಳ ಆರೋಪ ಸಾಬೀತಾಗಿ ನ್ಯಾಯಾಲಯ ನಾಲ್ಕೂವರೆ ವರ್ಷ ಸಜೆ ವಿಧಿಸಿದೆ. ಆರೋಪಿಗಳು ಇದರ ವಿರುದ್ದ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲಿ ತೀರ್ಪು ಬರುವ ಮೊದಲೇ ಗನ್ ಮ್ಯಾನ್ ಭದ್ರತೆ ವಾಪಸ್ ಪಡೆದುಕೊಳ್ಳಲಾಗಿದೆ.ಇದರಿಂದ ಭಯ ಉಂಟಾಗಿದೆ ಎಂದು ರಹೀಂ ಉಚ್ಚಿಲ್ ಹೇಳಿದ್ದಾರೆ.
ನನಗೆ 30ಕ್ಕೂ ಅಧಿಕ ಬೆದರಿಕೆ ಕರೆಗಳು ಬಂದಿವೆ.ಈ ಕುರಿತು ಮಂಗಳೂರು ದಕ್ಷಿಣ, ಹುಬ್ಬಳ್ಳಿ ಮೊದಲಾದೆಡೆ ದಾಖಲಾಗಿದೆ. ಗನ್ ಮ್ಯಾನ್ ವಾಪಸ್ ಪಡೆದಿರುವುದರಿಂದ ಭಯದಿಂದ ತಾಯಿಯೊಂದಿಗೆ ಓಡಾಡುತ್ತಿದ್ದೇನೆ ಎಂದವರು ಹೇಳಿದ್ದಾರೆ.
ನಾನು ಯಾವುದೇ ಧರ್ಮ, ಸಮುದಾಯದವರ ವಿರುದ್ದವಾಗಿ ನಡೆದುಕೊಂಡಿಲ್ಲ. ಕೆಲವರು ನನ್ನ ವಿಚಾರಗಳನ್ನು ತಪ್ಪಾಗಿ ತಿಳಿದುಕೊಂಡು ನನ್ನ ಹತ್ಯೆಗೆ ಯತ್ನಿಸುತ್ತಿದ್ದರೆ ಅವರ ಕ್ಷಮೆ ಕೋರುತ್ತೇನೆ.ತಾಯಿಗಾಗಿ ನಾನು ಬದುಕಬೇಕಾಗಿದೆ ಎಂದು ಹೇಳಿದ್ದಾರೆ.
ನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ತೊರೆಯುವುದಿಲ್ಲ. ನನಗೆ ಎರಡು ಬಾರಿ ಬ್ಯಾರಿ ಅಕಾಡೆಮಿಯ ಅಧ್ಯಕ್ಷ ಸ್ಥಾನ ನೀಡಿದ ಬಿಜೆಪಿಗೆ ಋಣಿಯಾಗಿದ್ದೇನೆ.ನಾನು ಬೇರೆ ರಾಜಕೀಯ ಪಕ್ಷ ಸೇರುವುದಿಲ್ಲ ಎಂದು ಹೇಳಿದ್ದಾರೆ.