ಬೆಂಗಳೂರು:PFI ನಿಷೇಧದ ವೇಳೆ ಬಂಧಿತ 8 ಮಂದಿ ಆರೋಪಿಗಳಿಗೆ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ಜಾಮೀನು ನೀಡಿದೆ.
ಕಳೆದ ಸೆಪ್ಟಂಬರ್ 22ರಂದು ದೇಶಾದ್ಯಂತ ಪಿಎಫ್’ಐ ಕಚೇರಿ, ನಾಯಕರ ಮನೆ ಮೇಲೆ ದಾಳಿ ನಡೆಸಿದ ಎನ್ ಐಎ ಮತ್ತು ಸ್ಥಳೀಯ ಪೊಲೀಸರು ಹಲವರನ್ನು ಬಂಧಿಸಿದ್ದರು.
ಕರ್ನಾಟಕದಲ್ಲಿ ಒಟ್ಟು 19 ಮಂದಿಯ ವಿರುದ್ಧ ಯುಎಪಿಎ ಮತ್ತು ಐಪಿಸಿ 153ಎ, 120ಬಿ ಸೆಕ್ಷನ್’ಗಳಡಿ ಎಫ್’ಐಆರ್ ದಾಖಲಿಸಲಾಗಿತ್ತು. ಈ ಪೈಕಿ 15 ಮಂದಿಯನ್ನು ಬಂಧಿಸಲಾಗಿದೆ. ನಾಲ್ವರು ತಲೆಮರೆಸಿಕೊಂಡಿದ್ದಾರೆ ಎಂದು ಇತ್ತೀಚೆಗೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಐಪಿಸಿ ಸೆಕ್ಷನ್ 153ಎ, 120ಬಿ ಸೆಕ್ಷನ್’ಗಳಡಿ ಬಂಧಿತರಾಗಿದ್ದ 8 ಮಂದಿ ತಮಗೆ ಜಾಮೀನು ನೀಡುವಂತೆ ಕೋರಿ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 50 ಸಾವಿರ ರೂ. ಶ್ಯೂರಿಟಿ ಆಧಾರದಲ್ಲಿ ಎಲ್ಲಾ 8 ಮಂದಿಗೆ ಜಾಮೀನು ನೀಡಿದೆ.
ಜಾಮೀನಿನ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ 8 ಮಂದಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಗುರುವಾರ ಬಿಡುಗಡೆಯಾಗಿದ್ದಾರೆ ಎಂದು ವರದಿಯಾಗಿದೆ.