ಹೊಸದಿಲ್ಲಿ:ವಿ.ಡಿ ಸಾವರ್ಕರ್ ಎಂದೇ ಖ್ಯಾತರಾಗಿರುವ ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಅವರ 140ನೇ ಜನ್ಮದಿನಾಚರಣೆಯ ದಿನ ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಮೇ 28) ಉದ್ಘಾಟಿಸಲಿದ್ದಾರೆ.
ವಿಪಕ್ಷ ನಾಯಕರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದು ಸಂಸತ್ ಕಟ್ಟಡವನ್ನು ಆ ದಿನ ಉದ್ಘಾಟಿಸಲು ನಿರ್ಧರಿಸಿರುವ ಹಿಂದೆ ರಾಜಕೀಯ ಉದ್ದೇಶಗಳಿವೆ ಎಂದಿದ್ದಾರೆ.
ಲೋಕಸಭೆಯ ಸೆಕ್ರೆಟರಿಯೇಟ್ ಗುರುವಾರ ಸಂಜೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿಯನ್ನು ಭೇಟಿಯಾಗಿ ಹೊಸ ಸಂಸತ್ತನ್ನು ಲೋಕಾರ್ಪಣೆ ಮಾಡಲು ಆಹ್ವಾನಿಸಿದರು ಎಂದು ಹೇಳಿದೆ.
ಕಟ್ಟಡವನ್ನು ಪ್ರಧಾನಿ ಉದ್ಘಾಟಿಸುವುದಾ?, ರಾಷ್ಟ್ರಪತಿಗಳೇಕೆ ಉದ್ಘಾಟಿಸುತ್ತಿಲ್ಲ ಎಂದೂ ಹಲವರು ಪ್ರಶ್ನಿಸುತ್ತಿದ್ದಾರೆ.
ಟಿಎಂಸಿ ಸಂಸದ ಸುಖೇಂದು ಶೇಖರ್ ಟ್ವೀಟ್ ಮಾಡಿ, ದೇಶದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ವೇಳೆ ಈ ಉದ್ಘಾಟನೆ ಸೂಕ್ತವಾಗಿದೆಯಾದರೂ ಸಂವಿಧಾನವನ್ನು 1949ರಲ್ಲಿ ಅಂಗೀಕರಿಸಿದ ದಿನವಾದ ನವೆಂಬರ್ 26ರಂದು ಉದ್ಘಾಟಿಸಿದ್ದರೆ ಅತ್ಯಂತ ಸೂಕ್ತವಾಗುತ್ತಿತ್ತು.ಆದರೆ ಅದನ್ನು ಮೇ 28ರಂದು ಸಾವರ್ಕರ್ ಜನ್ಮದಿನದಂದು ಮಾಡಲಾಗುತ್ತಿದೆ.ಇದೆಷ್ಟು ಸರಿ? ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಜೈರಾಂ ರಮೇಶ್, ಇದು ನಮ್ಮ ದೇಶದ ಸ್ಥಾಪಕರಿಗೆಲ್ಲಾ ಸಂಪೂರ್ಣ ಅವಮಾನ. ಗಾಂಧಿ, ನೆಹರು, ಪಟೇಲ್, ಬೋಸ್, ಅಂಬೇಡ್ಕರ್ ಎಲ್ಲರ ಅವಗಣನೆ ಎಂದು ಬರೆದಿದ್ದಾರೆ.
ಈ ತಿಂಗಳ ಕೊನೆಯ ವಾರದಲ್ಲಿ ಅಂದರೆ ಮೇ.28 ರಂದು ಹೊಸ ಸಂಸತ್ತಿನ ಕಟ್ಟಡವನ್ನು ಉದ್ಘಾಟಣೆ ನಡೆಯಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.