ಪಡುಬಿದ್ರಿ;ವ್ಯಕ್ತಿಯೋರ್ವರಿಗೆ ಮರಕ್ಕೆ ಕಟ್ಟಿ ಹಾಕಿ ಹಲ್ಲೆ
ಪಡುಬಿದ್ರಿ;ನಿವೃತ್ತ ಬಿಎಸ್ಸೆನ್ನೆಲ್ ಉದ್ಯೋಗಿಯನ್ನು ಮರವೊಂದಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ವರದಿಯಾಗಿದೆ.
ಪೂಂದಾಡು ನಿವಾಸಿ ಲಕ್ಷ್ಮಿ ನಾರಾಯಣ ಅವರ ಮೇಲೆ ಆರೋಪಿಗಳಾದ ಶೈಲೇಶ್, ವಿಠ್ಠಲ್, ರಂಜಿತ್ ಹಾಗೂ ಇನ್ನಿಬ್ಬರು ಕೈಯಿಂದ, ಹೆಲ್ಮೆಟ್, ಬೆಲ್ಟ್ಗಳಿಂದ ಹೊಡೆದಿರುವ ಆರೋಪ ಮಾಡಲಾಗಿದೆ.
ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಾರಾಯಣ ಅವರ ತಂದೆಯ ತಂಗಿ ಮನೆಯೂ ಇನ್ನಾ ಗ್ರಾಮದ ಗುರ್ಮೇರು ಎಂಬಲ್ಲಿದ್ದು ಅಲ್ಲಿಗೆ ಹೋಗಿದ್ದ ಅವರು ಸೋದರತ್ತೆಯ ಮಗಳು ಮೋಹಿತಾಳ ಚೈನನ್ನು ಪಡೆದು ಮುಂಡ್ಕೂರು ಸಹಕಾರಿ ಸೇವಾ ಸಂಘದಿಂದ 18,000 ರೂ ಸಾಲ ಪಡೆದಿದ್ದರು ಎನ್ನಲಾಗಿದೆ.
15,000 ರೂ.ಗಳನ್ನು ಕಿಸೆಯಲ್ಲಿರಿಸಿದ್ದ ಅವರು 3,000 ರೂ.ಗಳನ್ನು ಪರ್ಸ್ನಲ್ಲಿರಿಸಿ ಮೈಕ್ರೋವೇವ್ ಸ್ಟೇಶನ್ಗೆ ಹೋಗಿದ್ದಾಗ ಈ ಘಟನೆ ನಡೆದಿದೆ.ಪರ್ಸ್ ನಲ್ಲಿದ್ದ ಹಣ ಆರೋಪಿಗಳು ಸುಲಿಗೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ದುಷ್ಕರ್ಮಿಗಳು ಇವರನ್ನು ಮರಕ್ಕೆ ಕಟ್ಟಿ ಹಾಕಿದ ಅನಂತರ ಸ್ಥಳೀಯರಾದ ಗೀತಾ ಹಾಗೂ ಪ್ರೇಮಾ ಅವರನ್ನು ಘಟನಾ ಸ್ಥಳಕ್ಕೆ ಆರೋಪಿಗಳು ಕರೆಸಿಕೊಂಡಿದ್ದಾರೆ.ಆರೋಪಿಗಳ ಮಾತಿನಂತೆ ಗೀತಾ ಹಾಗೂ ಪ್ರೇಮಾ ಮರಕ್ಕೆ ಕಟ್ಟಿದ್ದ ಲಕ್ಷ್ಮಿ ನಾರಾಯಣರನ್ನು ಬಿಡಿಸಿದ್ದಾರೆ.
ಇನ್ನು ಇಲ್ಲಿಗೆ ಬಂದದ್ದೇ ಆದಲ್ಲಿ ಮರಕ್ಕೆ ನೇತು ಹಾಕುವುದಾಗಿ ಆರೋಪಿಗಳು ಕೊಲೆ ಬೆದರಿಕೆಯನ್ನು ಒಡ್ಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.