ಉಪ್ಪಿನಂಗಡಿ:ಪಿಯುಸಿ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೆಂಪಿಮಜಲು ನೇತ್ರಾವತಿ ನದಿಯ ಸನ್ಯಾಸಿ ಕಯ ಎಂಬಲ್ಲಿ ನಡೆದಿದೆ.
ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ರೂಪೇಶ್ (17) ಮೃತ ಯುವಕ.
ಬಜತ್ತೂರು ನಿವಾಸಿ ಓಡಿಯಪ್ಪ ಎಂಬವರ ಪುತ್ರ ರೂಪೇಶ್ ಕಟ್ಟೆಚ್ಚಾರ್ ಎಂಬಲ್ಲಿನ ತನ್ನ ಸಂಬಂಧಿಕರ ಮನೆಗೆ ಹೋಗಿ,
ಅಲ್ಲಿಂದ ನಿನ್ನೆ ಸಂಬಂಧಿಕ ಅಖಿಲೇಶ್ ಎಂಬಾತನೊಂದಿಗೆ ನೇತ್ರಾವತಿ ನದಿಯ ಸನ್ಯಾಸಿ ಕಯದಲ್ಲಿ ಮೀನು ಹಿಡಿಯಲೆಂದು ತೆರಳಿದ್ದ.ಈ ವೇಳೆ ಈಜು ಬಾರದ ರೂಪೇಶ್ ನೀರಿನಲ್ಲಿ ಮುಳುಗಿದ್ದಾನೆ.
ಅಖಿಲೇಶ್ ಆತನನ್ನು ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾನೆ.ಆದರೆ ಆಸ್ಪತ್ರೆಯಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರೆಂದು ತಿಳಿದು ಬಂದಿದೆ.
ಈ ಕುರಿತು ಮೃತ ವಿದ್ಯಾರ್ಥಿಯ ತಾಯಿ ಗೋಪಿ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೂಪೇಶ್ ರಾಜ್ಯಮಟ್ಟದ ಕಬಡ್ಡಿ ಆಟಗಾರನಾಗಿದ್ದ.ಪಿಯುಸಿ ಪರೀಕ್ಷೆಯಲ್ಲಿ ಇತ್ತೀಚೆಗೆ ಬಂದ ಫಲಿತಾಂಶದಲ್ಲಿ ಉತ್ತೀರ್ಣನಾಗಿದ್ದ.