ಮೈಸೂರಿನಲ್ಲಿ ಕಾರು ಅಪಘಾತ, ರಕ್ಷಣೆಗೆ ಬಂದ ಯುವಕ ಸೇರಿ ಇಬ್ಬರು ವಿದ್ಯುತ್ ಶಾಕ್ ಹೊಡೆದು ದುರ್ಮರಣ

ಮೈಸೂರು;ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರನ್ನು ಹೊರತರಲು ಯತ್ನಿಸಿದ ಇಬ್ಬರು ಯುವಕರು ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಘಟನೆ ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿ ನಡೆದಿದೆ.




ಅಶೋಕಾಪುರಂ ನಿವಾಸಿಗಳಾದ ಕಿರಣ್ ಹಾಗೂ ರವಿಕುಮಾರ್ ಮೃತ ದುರ್ದೈವಿಗಳು.

ಇವರ ನೆರವಿಗೆ ಬಂದ ರವಿ,ಸಂದೇಶ್, ಶಿವಕುಮಾರ್ ವಿದ್ಯುತ್ ಶಾಕ್ ನಿಂದ ಗಾಯಗೊಂಡಿದ್ದಾರೆ.ಇವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ರವಿಕುಮಾರ್ ಗುರುವಾರ ರಾತ್ರಿ ಸಂಸದ ಶ್ರೀನಿವಾಸ್ ಪ್ರಸಾದ್ ರವರ ಕುಟುಂಬಸ್ಥರಿಗೆ ಸೇರಿದ ಇನೋವಾ ಕಾರನ್ನು ಟ್ರಯಲ್ ನೋಡುವುದಾಗಿ ಪಡೆದಿದ್ದಾರೆ. ಮಾನಂದವಾಡಿ ರಸ್ತೆಯಲ್ಲಿ ರವಿಕುಮಾರ್, ಭಾಸ್ಕರ್, ರವಿ, ಸಂದೇಶ್ ಹಾಗೂ ಶಿವಕುಮಾರ್ ಆಶೋಕಾಪುರಂ ನತ್ತ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಕಾಂಪೌಂಡ್ ಗೆ ಢಿಕ್ಕಿ ಹೊಡೆದು ನಂತರ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ.

ಕಾಂಪೌಂಡ್ ಹಾಗೂ ಕಂಬದ ನಡುವೆ ಸಿಲುಕಿದ ಕಾರನ್ನು ಹೊರತರಲು ಇವರು ಯತ್ನಿಸಿದ್ದಾರೆ. ಈ ವೇಳೆ ಆಟೋದಲ್ಲಿ ಬರುತ್ತಿದ್ದ ಡ್ರೈವರ್ ಕಿರಣ್ ಕುಮಾರ್ ನೆರವಿಗೆ ಬಂದಿದ್ದಾರೆ.ಕಾರನ್ನು ಹೊರತರುವ ಯತ್ನದಲ್ಲಿದ್ದ ಇವರಿಗೆ ವಿದ್ಯುತ್ ಸಂಪರ್ಕ ಸಾಧಿಸಿದೆ.

ಹೈವೋಲ್ಟೇಜ್ ತಂತಿ ಸಂಪರ್ಕ ಸಾಧಿಸಿದ ಪರಿಣಾಮ ರವಿಕುಮಾರ್ ಕುಸಿದು ಬಿದ್ದಿದ್ದಾರೆ. ನೆರವಿಗೆ ಬಂದ ಆಟೋಡ್ರೈವರ್ ಕಿರಣ್ ಕೂಡ ಮೃತಪಟ್ಟಿದ್ದಾರೆ. ಇವರಿಬ್ಬರ ನೆರವಿಗೆ ಬಂದ ರವಿ, ಸಂದೇಶ್, ಶಿವಕುಮಾರ್ ಗೂ ಶಾಕ್ ಹೊಡೆದಿದೆ. ಐವರನ್ನೂ ಕೆ.ಆರ್.ಆಸ್ಪತ್ರೆಗೆ ಸಾಗಿಸಲಾಗಿದೆ.

ಕೆ.ಆರ್.ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




ಟಾಪ್ ನ್ಯೂಸ್