ಬೆಂಗಳೂರು:ರಾಜ್ಯ ಕಾಂಗ್ರೆಸ್ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ಧಾಳಿಯನ್ನು ನಡೆಸಿದೆ.ರೌಡಿ ಶೀಟರ್ ಫೈಟರ್ ರವಿ ಎದುರು ಕೈ ಮುಗಿದು ನಿಂತ ಪ್ರಧಾನಿ ನರೇಂದ್ರ ಮೋದಿಯ ಫೋಟೋ ಹಂಚಿಕೊಂಡು ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.
ಈ ಕುರಿತ ಫೋಟೋವೊಂದನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕಾಂಗ್ರೆಸ್ ಹಂಚಿಕೊಂಡಿದ್ದು, ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವೇ ಇಲ್ಲ. ಫೈಟರ್ ರವಿ ಎಂಬ ರೌಡಿ ಶೀಟರ್ ಎದುರು ಕೈಮುಗಿದು ನಿಂತ ನರೇಂದ್ರ ಮೋದಿ ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ ಎಂದು ಆರೋಪಿಸಿದೆ.
ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು ಎಂದು ಟ್ವೀಟ್ ಮಾಡಿದೆ.
ಮತ್ತೊಂದು ಟ್ವೀಟ್ ನಲ್ಲಿ ರಾತ್ರೋ ರಾತ್ರಿ ಉರಿಗೌಡ, ದೊಡ್ಡ ನಂಜೇಗೌಡ ಮಹಾದ್ವಾರ ತೆರವು ಕುರಿತಂತೆಯೂ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ನಿಮ್ಮನ್ನು ಸ್ವಾಗತಿಸಲು ಧಿಡೀರ್ ಹಾಜರಾಗಿದ್ದ ಉರಿಗೌಡ, ದೊಡ್ಡನಂಜೇಗೌಡ ಎಂಬ ಫಿಕ್ಷನ್ ಕ್ಯಾರೆಕ್ಟರ್ಗಳು ರಾತ್ರೋರಾತ್ರಿ ಎಲ್ಲಿ ಹೋದರು ಎಂದು ಒಮ್ಮೆ ಸಿಟಿ ರವಿ ಅವರನ್ನು ವಿಚಾರಿಸಿ!
ರಾಜ್ಯ ಬಿಜೆಪಿ ನಾಯಕರ ನಕಲಿತನ, ಸುಳ್ಳು, ಆತ್ಮವಂಚನೆ, ಡೋಂಗಿತನ ಎಲ್ಲವಕ್ಕೂ ಮೋದಿಯವರೇ ಪ್ರೇರಣೆಯೇ? ಎಂದು ಪ್ರಶ್ನಿಸಿದೆ.