-ನವಾಬ್ ಮತ್ತು ಶೋಯೆಬ್ ಎಂಬ ಮಾಂಸ ವ್ಯಾಪಾರಿಗಳಿಗೆ ಥಳಿತ
-ಪೊಲೀಸರು ಸೇರಿ 7 ಮಂದಿಯಿಂದ ಕೃತ್ಯ
ನವದೆಹಲಿ:ಪೂರ್ವ ದೆಹಲಿಯ ಶಾಹದಾರದಲ್ಲಿ ಇಬ್ಬರು ಮಾಂಸ ಮಾರಾಟಗಾರರನ್ನು ಮೂವರು ದೆಹಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಏಳು ಮಂದಿ ಥಳಿಸಿ ದರೋಡೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಮಾ.7 ರಂದು ಮಾಂಸ ವ್ಯಾಪಾರಿಗಳಾದ ಮುಸ್ತಫಾಬಾದ್ ನಿವಾಸಿ ನವಾಬ್ ಹಾಗೂ ಸಂಬಂಧಿ ಶೋಯೆಬ್ ಕಾರಿನಲ್ಲಿ ತೆರಳುವಾಗ ಆನಂದ್ ವಿಹಾರ್ ಬಳಿ ಸ್ಕೂಟರ್ವೊಂದಕ್ಕೆ ಇವರ ಕಾರು ಡಿಕ್ಕಿ ಹೊಡೆದಿದೆ. ಸ್ಕೂಟರ್ ಚಾಲಕ ನಷ್ಟ ಪರಿಹಾರವಾಗಿ ಮಾಂಸ ವ್ಯಾಪಾರಿಗಳಿಂದ 4,000 ರೂ. ಕೊಡುವಂತೆ ಆಗ್ರಹಿಸಿದ್ದಾನೆ. ಘಟನಾ ಸ್ಥಳಕ್ಕೆ ಎಎಸ್ಐ ಜೊತೆ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಜೀಪ್ನಲ್ಲಿ ಆಗಮಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ನಂತರ ಪೊಲೀಸರು ಮಾಂಸ ವ್ಯಾಪಾರಿಗಳಿಂದ 2,500 ರೂಪಾಯಿ ಪಡೆದು ಸ್ಕೂಟರ್ ನಷ್ಟದ ಹಣವಾಗಿ ಚಾಲಕನಿಗೆ ಕೊಟ್ಟಿದ್ದಾರೆ.
ಬಳಿಕ ಕಾರಿನಲ್ಲಿ ಮಾಂಸ ಸಾಗಾಟ ಮಾಡುತ್ತಿದ್ದ ಕಾರಣ ನೀಡಿ 15 ಸಾವಿರ ರೂ.ಕೊಡುವಂತೆ ಪೊಲೀಸರು ಬೇಡಿಕೆ ಇಟ್ಟಿದ್ದಾರೆ. ದುಡ್ಡು ಕೊಡಲು ವ್ಯಾಪಾರಿಗಳು ನಿರಾಕರಿಸಿದಾಗ ಇತರೆ ನಾಲ್ಕು ಜನರನ್ನು ಕರೆದು ಇಬ್ಬರು ವ್ಯಾಪಾರಿಗಳನ್ನು ಪೊಲೀಸರು ತಮ್ಮೊಂದಿಗೆ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಬಳಿಕ ನವಾಬ್ ಮತ್ತು ಶೋಯೆಬ್ ಇಬ್ಬರನ್ನು ಥಳಿಸಿ, ಇಬ್ಬರ ಕೈಗಳಿಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ. ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ.ನಂತರ ಪೊಲೀಸರು ವ್ಯಾಪಾರಿಗಳಿಗೆ ಮತ್ತಿನ ಚುಚ್ಚು ಮದ್ದು ನೀಡಿ 25 ಸಾವಿರ ರಪಾಯಿ ಪಡೆದು ಖಾಲಿ ಕಾಗದದ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಸಂತ್ರಸ್ತರು ದೂರಿನಲ್ಲಿ ದಾಖಲಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದರು.
ಘಟನೆಯ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ ನಾಲ್ಕು ದಿನಗಳ ನಂತರ ಎಲ್ಲ 7 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.