ಚಿಂತಾಮಣಿ:ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಸ್ನೇಹಿತನನ್ನು ಕತ್ತುಕೊಯ್ದು ರಕ್ತ ಕುಡಿದ ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ನಡೆದಿದೆ.
ಘಟನೆಯಲ್ಲಿ ಗಾಯಗೊಂಡ ಮಾರೇಶ್ ಎಂಬಾತ ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬಟ್ಟೆ ವ್ಯಾಪಾರಿ ವಿಜಯ್ ವಿರುದ್ಧ ಕೇಸ್ ಗೆ ಸಂಬಂಧಿಸಿ
ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ವಿಜಯ್ ನನ್ನು ಬಂಧಿಸಿದ್ದಾರೆ.
ಆರೋಪಿ ವಿಜಯ್ ನ ಪತ್ನಿ ಜೊತೆ ಮಾರೇಶ್ ಅನೈತಿಕ ಸಂಬಂಧ ಹೊಂದಿದ್ದ.ಈ ವಿಷಯ ವಿಜಯ್ ಗಮನಕ್ಕೆ ಬಂದ ನಂತರ ಇವರಿಬ್ಬರ ನಡುವೆ ವೈಮನಸ್ಸು ಮೂಡಿತ್ತು. ಮಾರೇಶ್ಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ವಿಜಯ್ ಮತ್ತು ಆತನ ಸ್ನೇಹಿತ ಜಾನ್ ಕಳೆದ ಜೂನ್ 19ರಂದು ಆತನನ್ನು ಚಿಂತಾಮಣಿ ತಾಲ್ಲೂಕಿನ ಸಿದ್ದೇಪಲ್ಲಿ ಕ್ರಾಸ್ ಬಳಿ ಇರುವ ಅರಣ್ಯಕ್ಕೆ ಕರೆದೊಯ್ದಿದ್ದರು.
ಅಲ್ಲಿ ಮಾತಿಗೆ ಮಾತು ಬೆಳೆದು ಮಾರೇಶ್ನ ಕುತ್ತಿಗೆಗೆ ವಿಜಯ್ ಚಾಕು ಹಾಕಿದ್ದಾನೆ.ಈ ವೇಳೆ ಹರಿದು ಬಂದ ರಕ್ತವನ್ನು ಆತ ಕುಡಿಯುವ ವಿಡಿಯೊ ಮಾಡಿಸಿಕೊಂಡಿದ್ದಾನೆ.
ಈ ವಿಡಿಯೊ ಚಿತ್ರೀಕರಿಸಿದ್ದು ಜಾನ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ವೇಳೆ ಹೇಗೋ ಸ್ಥಳಕ್ಕೆ ಬಂದಿದ್ದ ಮಾರೇಶ್ನ ಸಹೋದರ ವಿಜಯ್ ಮತ್ತು ಜಾನ್ರಿಂದ ಅವನನ್ನು ರಕ್ಷಿಸಿ, ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಜಯ್ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹರಿಬಿಟ್ಟ ನಂತರ ಪ್ರಕರಣ ಬಯಲಿಗೆ ಬಂದಿತ್ತು. ಆರೋಪಿಗಳ ವಿರುದ್ಧ ಮಾರೇಶ್ನ ಸಹೋದರನೇ ಕೆಂಚಾರ್ಲಹಳ್ಳಿ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಿಸಿದ್ದ.
ವಿಜಯ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಈ ವಿಡಿಯೊ ಕ್ಲಿಪ್ ವೈರಲ್ ಆಗಿತ್ತು. ಆರೋಪಿ ವಿಜಯ್ ಮತ್ತು ಗಾಯಾಳು ಮಾರೇಶ್ ಕಳೆದ ಕೆಲ ದಿನಗಳಿಂದ ಚಿಂತಾಮಣಿಯ ಗಾಂಧಿ ನಗರದಲ್ಲಿ ವಾಸಿಸುತ್ತಿದ್ದರು.
ಗಾಯಗೊಂಡಿರುವ ಮಾರೇಶ್ ಸಹ ಬಟ್ಟೆ ವ್ಯಾಪಾರದ ಕೆಲಸ ಮಾಡಿಕೊಂಡಿಸದ್ದ. ಇವನು ಮೂಲತಃ ಬಾಗೇಪಲ್ಲಿ ತಾಲ್ಲೂಕು ಮಂಡ್ಯಂಪಲ್ಲಿ ಗ್ರಾಮದನು ಎಂದು ಪೊಲೀಸರು ಹೇಳಿದ್ದಾರೆ.