ಮಣಿಪುರ; ಪಿಡಬ್ಲ್ಯುಡಿ ಸಚಿವ ಕೊಂತೌಜಂ ಗೋವಿಂದಸ್ ಅವರ ಬಿಷ್ಣುಪುರ ಜಿಲ್ಲೆಯ ಮನೆಯನ್ನು ಬುಧವಾರ ಆಕ್ರೋಶಗೊಂಡ ಗುಂಪು ಧ್ವಂಸಗೊಳಿಸಿದೆ.
ರಾಜ್ಯ ಸರ್ಕಾರವು ಇತರ ಸಮುದಾಯಕ್ಕೆ ಸೇರಿದ ಶಸ್ತ್ರಸಜ್ಜಿತ ಉಗ್ರಗಾಮಿಗಳಿಂದ ಸ್ಥಳೀಯರನ್ನು ರಕ್ಷಿಸಲು ಸಾಕಷ್ಟು ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಗುಂಪು ಆರೋಪಿಸಿದೆ.
ಯುವ ವ್ಯವಹಾರ ಮತ್ತು ಕ್ರೀಡಾ ಖಾತೆಯನ್ನು ಹೊಂದಿರುವ ಗೋವಿಂದಸ್ ಅವರು ಬಿಜೆಪಿಯ ಹಿರಿಯ ಸದಸ್ಯರಾಗಿದ್ದಾರೆ.
ಬಿಷ್ಣುಪುರ್ ಜಿಲ್ಲೆಯ ನಿಂಗ್ತೌಖೋಂಗ್ ಬಜಾರ್ ಪ್ರದೇಶದಲ್ಲಿ ಸುಮಾರು 100 ಜನರು, ಅದರಲ್ಲಿ ಬಹುತೇಕ ಮಹಿಳೆಯರಿದ್ದರು.
ಸಚಿವರ ಮನೆಗೆ ನುಗ್ಗಿ ಗೇಟ್, ಕಿಟಕಿಗಳು, ಕೆಲವು ಪೀಠೋಪಕರಣಗಳು, ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ವಾಹನಗಳನ್ನು ಹಾನಿಗೊಳಿಸಿದ್ದರು. ಈ ವೇಳೆ ಸಚಿವರು ಮತ್ತು ಅವರ ಕುಟುಂಬದ ಸದಸ್ಯರು ಮನೆಯಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ.
ಮೇ.3 ರಂದು ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯದ ಜನರ ನಡುವೆ ನಡೆದ ಜನಾಂಗೀಯ ಹಿಂಸಾಚಾರದಲ್ಲಿ ಕನಿಷ್ಠ 71 ಜನರು ಸಾವನ್ನಪ್ಪಿದರು ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡ ನಂತರ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕರ ಮನೆಯನ್ನು ಇದೀಗ ಧ್ವಂಸಗೊಳಿಸಲಾಗಿದೆ.
ಮಣಿಪುರದಲ್ಲಿ ಬುಧವಾರ ನಡೆದ ಪ್ರತ್ಯೇಕ ಹಿಂಸಾಚಾರದ ಘಟನೆಗಳಲ್ಲಿ ಓರ್ವ ಮೃತಪಟ್ಟಿದ್ದಾರೆ ಹಾಗೂ ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ರಾಜ್ಯ ಸರಕಾರ ತಿಳಿಸಿದೆ.
ಮೃತಪಟ್ಟ ವ್ಯಕ್ತಿಯನ್ನು 30 ವರ್ಷದ ತೊಯಿಜಾಮ್ ಚಂದ್ರಮಣಿ ಎಂದು ಗುರುತಿಸಲಾಗಿದೆ.ಗುಂಡಿನಿಂದ ಗಾಯಗೊಂಡ ಚಂದ್ರಮಣಿಗೆ ಆಸ್ಪತ್ರೆ ಕೊಂಡೊಯ್ಯುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ರಾಜ್ಯ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಅವರು ತಿಳಿಸಿದ್ದಾರೆ.
ಬಿಷ್ಣುಪುರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಶಂಕಿತ ಉಗ್ರರ ಗುಂಪೊಂದು ಮೂರು ಮನೆಗಳಿಗೆ ಬೆಂಕಿ ಹಚ್ಚಿದೆ. ಇದಕ್ಕೆ ಪ್ರತೀಕಾರವಾಗಿ ಅನಾಮಿಕ ವ್ಯಕ್ತಿಗಳು ಪೌಬಾಕ್ಚಾವೊ ಹಾಗೂ ಸಮೀಪದ ಪ್ರದೇಶಗಳಲ್ಲಿ ಇನ್ನು ಕೆಲವು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.