ಮಣಿಪುರ; ಮೇಟಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವುದರ ವಿರುದ್ಧ ಬುಡಕಟ್ಟು ಗುಂಪುಗಳು ನಡೆಸುತ್ತಿರುವ ಪ್ರತಿಭಟನೆಗಳ ಮಧ್ಯೆ, ರಾಜ್ಯಪಾಲರು ಗುರುವಾರ ರಾಜ್ಯ ಗೃಹ ಇಲಾಖೆಯ ಕಂಡಲ್ಲಿ ಗುಂಡು ಹಾರಿಸುವ ಆದೇಶಕ್ಕೆ ಅನುಮೋದನೆ ನೀಡಿದ್ದಾರೆ.
ರಾಜ್ಯದ ರಾಜ್ಯಪಾಲರು ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್ಗಳು, ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ಗಳು ಮತ್ತು ಎಲ್ಲಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ಗಳು / ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ಗಳಿಗೆ ‘ಎಲ್ಲಾ ರೀತಿಯ ಮನವೊಲಿಕೆ, ಎಚ್ಚರಿಕೆ, ಸಮಂಜಸವಾದ ಬಲ ಇತ್ಯಾದಿಗಳು ಮುಗಿದಿರುವ ವಿಪರೀತ ಸಂದರ್ಭಗಳಲ್ಲಿ ಗುಂಡು ಹಾರಿಸುವ’ ಆದೇಶಗಳನ್ನ ಹೊರಡಿಸಲು ಅಧಿಕಾರ ನೀಡಿದ್ದಾರೆ.
ಮಣಿಪುರದಲ್ಲಿ ಪರಿಸ್ಥಿತಿ ಹದಗೆಟ್ಟಿದ್ದರಿಂದ ಸೇನೆ ಮತ್ತು ಅಸ್ಸಾಂ ರೈಫಲ್ಸ್ನ 55 ತುಕಡಿಗಳನ್ನು ನಿಯೋಜಿಸಲಾಗಿದ್ದು, 14 ತುಕಡಿಗಳನ್ನು ಸ್ಟ್ಯಾಂಡ್ಬೈನಲ್ಲಿ ಇರಿಸಲಾಗಿದೆ. ಇದುವರೆಗೆ 9,000 ಜನರನ್ನು ಹಿಂಸಾಚಾರ ಪೀಡಿತ ಪ್ರದೇಶಗಳಿಂದ ಪಡೆಗಳು ರಕ್ಷಿಸಿ ಆಶ್ರಯ ನೀಡಿವೆ. ಹೆಚ್ಚಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಪರಿಶಿಷ್ಟ ಪಂಗಡದ(ಎಸ್ಟಿ) ಸ್ಥಾನಮಾನಕ್ಕಾಗಿ ಬುಡಕಟ್ಟು ಜನರಲ್ಲದ ಮೇಟಿಗಳ ಬೇಡಿಕೆ ವಿರೋಧಿಸಿ ಚುರಾಚಂದ್ ಪುರ ಜಿಲ್ಲೆಯ ಟೊರ್ ಬಂಗ್ ಪ್ರದೇಶದಲ್ಲಿ ಎಲ್ಲಾ ಬುಡಕಟ್ಟು ವಿದ್ಯಾರ್ಥಿ ಒಕ್ಕೂಟ ಮಣಿಪುರ(ಎಟಿಎಸ್ಯುಎಂ) ಕರೆದ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ಬುಧವಾರ ಮಣಿಪುರದ ಹಲವು ಜಿಲ್ಲೆಗಳಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದೆ.
ರ್ಯಾಲಿಯಲ್ಲಿ ಸಾವಿರಾರು ಆಂದೋಲನಕಾರರು ಭಾಗವಹಿಸಿದ್ದರು, ಈ ಸಂದರ್ಭದಲ್ಲಿ ಆದಿವಾಸಿಗಳು ಮತ್ತು ಆದಿವಾಸಿಗಳಲ್ಲದವರ ನಡುವೆ ಘರ್ಷಣೆಗಳು ಭುಗಿಲೆದ್ದವು.