ಮಂಗಳೂರು:ಕಳವಾರು ಬಳಿ ಯುವಕನೋರ್ವನ ಮೇಲೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಶಾಂತ್ ಯಾನೆ ಪಚ್ಚು(28),ಧನರಾಜ್(23) ಮತ್ತು ಯಜ್ಞೇಶ್(22) ಬಂಧಿತರು.ಇತರ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಅಬ್ದುಲ್ ಸಫ್ವಾನ್ ತನ್ನ ಸ್ನೇಹಿತ ಮುಹಮ್ಮದ್ ಸಫ್ವಾನ್ ಎಂಬಾತನೊಂದಿಗೆ ಸಂಜೆ 7:30ರ ಸುಮಾರಿಗೆ ಕಳವಾರು ಗೆಳೆಯರ ಬಳಗ ಬಸ್ಸು ನಿಲ್ದಾಣದ ಬಳಿ ಬೈಕಿನಲ್ಲಿ ತೆರಳುತ್ತಿದ್ದಾಗ ಎದರುಗಡೆಯಿಂದ ಆರೋಪಿಗಳಾದ ಪ್ರಶಾಂತ್ ಮತ್ತು ಧನರಾಜ್ ಎಂಬವರು ತಮ್ಮ ಬೈಕ್ ನಿಂದ ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ,ಆರೋಪಿಗಳು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಆರೋಪಿಗಳ ಪೈಕಿ ಕಳವಾರು ಗಣೇಶ ಎಂಬಾತ ಸಫ್ವಾನ್ ನ ಬಲಕೈ ತೋಳಿಗೆ ಚೂರಿಯಿಂದ ಇರಿದಿದ್ದು, ಯಜ್ಞೇಶ ಎಂಬಾತ ಬೆನ್ನಿಗೆ ಚೂರಿಯಿಂದ ಚುಚ್ಚಿದ್ದಾನೆ. ರಕ್ಷಣೆಗೆ ಬಂದ ಸ್ನೇಹಿತ ಮುಹಮ್ಮದ್ ಸಫ್ವಾನ್ ನನ್ನು ಆರೋಪಿಗಳಾದ ಪುನೀತ್, ಬಬ್ಬು ಗಣೇಶ್, ಪ್ರದೀಪ್ ಮತ್ತು ಇತರರು ರಕ್ಷಣೆಗೆ ಬಾರದಂತೆ ಕೈಯಿಂದ ಹೊಡೆದು ಬಿಗಿಯಾಗಿ ಹಿಡಿದುಕೊಂಡಿದ್ದರು ಎಂದು ಆರೋಪಿಸಲಾಗಿದೆ.