ಮಡಿಕೇರಿ;ಚುನಾವಣಾ ನೀತಿ ಸಂಹಿತೆ ರಾಜ್ಯದಲ್ಲಿ ಚುನಾವಣೆ ಘೋಷಣೆ ಬೆನ್ನಲ್ಲೇ ಜಾರಿಯಾಗಿದೆ.ಎಲ್ಲೆಡೆ ಅಧಿಕಾರಿಗಳು ಕಣ್ಗಾವಲಿನಲ್ಲಿದ್ದಾರೆ.ಇದೀಗ ವಾಟ್ಸಾಪ್ ಗ್ರೂಪ್ನ ಅಡ್ಮಿನ್ಗೂ ನೀತಿ ಸಂಹಿತೆ ಉಲ್ಲಂಘನೆಯ ನೊಟೀಸ್ ಹೋಗಿದೆ.
ಕೊಡಗು ಜಿಲ್ಲೆಯ ಕುಶಾಲನಗರದ ವಿ.ಪಿ.ಶಶಿಧರ್ ಎಂಬವರಿಗೆ ಮಡಿಕೇರಿ ಕ್ಷೇತ್ರದ ಚುನಾವಣಾಧಿಕಾರಿ ಜಾರಿ ಮಾಡಿದ್ದಾರೆ ಎನ್ನಲಾದ ನೊಟೀಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೊಟೀಸ್ ನಲ್ಲಿ ನೀವು ಅಡ್ಮಿನ್ ಆಗಿರುವ ‘ನಮ್ಮ ಕುಶಾಲನಗರ’ ವಾಟ್ಸಾಪ್ ಗ್ರೂಪ್ನ ಮೂಲಕ ಯಾವುದೇ ಪೂರ್ವ ಅನುಮತಿ ಪಡೆಯದೆ ರಾಜಕೀಯ ಪ್ರೇರಿತ ಹೇಳಿಕೆಯ ವೀಡಿಯೊ ತುಣುಕನ್ನು ಹಂಚಿಕೊಂಡಿರುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ ಎಂದು ಚುನಾವಣಾಧಿಕಾರಿ ಉಲ್ಲೇಖಿಸಿದ್ದಾರೆ.
ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಪ್ರಜಾಪ್ರತಿನಿಧಿ ಕಾಯ್ದೆ 1951ರ ಆಧಾರದಲ್ಲಿ ನಿಮ್ಮ ಮೇಲೆ ಏಕೆ ಕಾನೂನು ಕ್ರಮ ಜರುಗಿಸಬಾರದು ಎಂಬುದಕ್ಕೆ ಈ ನೋಟಿಸ್ ತಲುಪಿದ 24 ಗಂಟೆಯೊಳಗಾಗಿ ಖುದ್ದು ಲಿಖಿತ ಉತ್ತರ ನೀಡುವಂತೆ ಸೂಚಿಸಲಾಗಿದೆ.