ತಿರುವನಂತಪುರಂ:ಮಾವಿನ ಹಣ್ಣಿನ ಬಾಕ್ಸ್ ಕದ್ದ ಕೇರಳದ ಪೋಲೀಸ್ ಗೆ ಸೇವೆಯಿಂದ ವಜಾ ಮಾಡಲಾಗಿದೆ.
ಸಿವಿಲ್ ಪೊಲೀಸ್ ಅಧಿಕಾರಿಯೊಬ್ಬರು ಅಂಗಡಿಯೊಂದರಿಂದ 10 ಕೆಜಿ ಮಾವಿನ ಹಣ್ಣಿನ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಸುದ್ದಿ ಹೊರಬಿದ್ದ ನಂತರ ಮುಜುಗರವನ್ನು ತಪ್ಪಿಸಲು ಕೇರಳ ಪೊಲೀಸರು ಬುಧವಾರ “ಮಾವು ಕಳ್ಳ” ನನ್ನು ಸೇವೆಯಿಂದ ವಜಾಗೊಳಿಸಿದ್ದಾರೆ.
ಇಡುಕ್ಕಿಯ ಪೊಲೀಸ್ ಅಧೀಕ್ಷಕರು ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪೊಲೀಸ್ ಅಧಿಕಾರಿ ಪಿ.ವಿ. ಶಿಹಾಬ್ ಅವರು ಕೊಟ್ಟಾಯಂ ಜಿಲ್ಲೆಯ ಕಂಜಿರಪಲ್ಲಿಯ ಅಂಗಡಿಯೊಂದರ ಮುಂಭಾಗ ಇರಿಸಲಾಗಿದ್ದ ಮಾವಿನ ಹಣ್ಣಿನ ಪೆಟ್ಟಿಗೆಯನ್ನು ಒಯ್ಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಆಗ ಕೆಜಿ ಮಾವಿನಹಣ್ಣಿಗೆ 500 ರೂ.ಗೂ ಅಧಿಕ ಬೆಲೆಯಿತ್ತು.ಬಳಿಕ ಅವರು, ತಮ್ಮ ದ್ವಿಚಕ್ರ ವಾಹನದ ಮೇಲೆ ಬಾಕ್ಸ್ ಇಟ್ಟುಕೊಂಡು ಓಡಿಸುತ್ತಿದ್ದ ದೃಶ್ಯಗಳು ಕಂಡುಬಂದಿದ್ದವು.
ಅಂಗಡಿಯವನು ಮರುದಿನ ತನ್ನ ಅಂಗಡಿಯನ್ನು ತೆರೆಯಲು ಬಂದಾಗ ಮಾವಿನ ಹಣ್ಣಿನ ಪೆಟ್ಟಿಗೆ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಬಳಿಕ ಅವರು ತಮ್ಮ ಸಿಸಿಟಿವಿಯನ್ನು ಪರಿಶೀಲಿಸಿದಾಗ ಪೊಲೀಸರು ಹಣ್ಣನ್ನು ತೆಗೆದುಕೊಂಡು ಹೋಗಿರುವುದನ್ನು ಕಂಡು ಗಾಬರಿಗೊಂಡಿದ್ದರು.
ವಿಡಿಯೋ ವೈರಲ್ ಆದ ನಂತರ, ಇಡುಕ್ಕಿ ಸಶಸ್ತ್ರ ಮೀಸಲು ಶಿಬಿರ ಪೊಲೀಸ್ ಘಟಕಕ್ಕೆ ನಿಯೋಜಿಸಲಾಗಿದ್ದ ಶಿಹಾಬ್ ನಾಪತ್ತೆಯಾಗಿದ್ದರು.ಕೂಡಲೇ ಆತನ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯ ನಂತರ ಇಡುಕ್ಕಿ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.