ಕೇರಳ;ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಆತ್ಮಾಹುತಿ ದಾಳಿ ನಡೆಸುವುದಾಗಿ ಬೆದರಿಕೆ ಪತ್ರ ಬರೆದಿದ್ದಾನೆ ಎನ್ನಲಾದ ಕೊಚ್ಚಿ ಮೂಲದ ವ್ಯಕ್ತಿಯನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ.
ಬೆದರಿಕೆ ಪತ್ರ ಬರೆದ ಆರೋಪಿಯನ್ನು ಕೇರಳ ಪೊಲೀಸರು ಶನಿವಾರ ಬಂಧಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಈ ಸಂಬಂಧ ಸುದ್ದಿಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಕೊಚ್ಚಿ ನಗರ ಪೊಲೀಸ್ ಆಯುಕ್ತ ಕೆ.ಸೇತು ರಾಮನ್, ಪ್ರಧಾನಿ ವಿರುದ್ಧ ಬೆದರಿಕೆ ಪತ್ರ ಕಳುಹಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ.ಕ್ಸೇವಿಯರ್(53) ಎಂಬಾತನನ್ನು ನಿನ್ನೆ ಬಂಧಿಸಲಾಗಿತ್ತು. ಈ ಪತ್ರ ಬರೆಯಲು ಕಾರಣ ವೈಯಕ್ತಿಕ ದ್ವೇಷ ಎಂದು ತಿಳಿದುಬಂದಿದೆ. ತನ್ನ ನೆರೆಹೊರೆಯವರನ್ನು ಸಿಕ್ಕಿಸಲು ಆರೋಪಿ ಈ ಪತ್ರ ಬರೆದಿದ್ದಾರೆ. ವಿಧಿವಿಜ್ಞಾನದ ಸಹಾಯದಿಂದ ನಾವು ಆರೋಪಿಯನ್ನು ಪತ್ತೆಹಚ್ಚಿದ್ದೇವೆ ಎಂದು ತಿಳಿಸಿದ್ದಾರೆ.
ಕೇರಳದ ಕೊಚ್ಚಿಯಲ್ಲಿರುವ ವ್ಯಕ್ತಿಯೊಬ್ಬರು ಮಲಯಾಳಂ ಭಾಷೆಯಲ್ಲಿ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರ ಕಚೇರಿಯಲ್ಲಿ ಸ್ವೀಕರಿಸಲಾಗಿದ್ದು ಅವರು ಕಳೆದ ವಾರ ಅದನ್ನು ಪೊಲೀಸರಿಗೆ ಹಸ್ತಾಂತರಿಸಿದ್ದರು.
ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು, ಎನ್. ಕೆ. ಜಾನಿ ಎಂಬ ವ್ಯಕ್ತಿಯನ್ನು ಪತ್ತೆಹಚ್ಚಿದರು. ಏಕೆಂದರೆ ಅವರ ವಿಳಾಸದಿಂದ ಈ ಪತ್ರವನ್ನು ಕಳಿಸಲಾಗಿತ್ತು ಎಂದು ತಿಳಿದುಬಂದಿತ್ತು.
ಈ ಪತ್ರದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಗಾದ ಸ್ಥಿತಿಯೇ ಮೋದಿಗೂ ಆಗುತ್ತದೆ ಎಂದು ಬೆದರಿಸಲಾಗಿತ್ತು. ಆದರೆ, ಕೊಚ್ಚಿ ಮೂಲದ ಜಾನಿ ಅವರು ಪತ್ರ ಬರೆದಿಲ್ಲ ಎಂದು ಹೇಳಿದ್ದು, ತಮ್ಮ ವಿರುದ್ಧ ದ್ವೇಷ ಸಾಧಿಸಲು ಹತ್ಯೆ ಬೆದರಿಕೆ ಪತ್ರ ನನ್ನ ಹೆಸರಿನಲ್ಲಿ ಬರೆದಿರುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ತಿರುವನಂತಪುರಂ ಮತ್ತು ಕಾಸರಗೋಡು ನಡುವೆ ತಿರುವನಂತಪುರಂ ಸೆಂಟ್ರಲ್ ಸ್ಟೇಷನ್ನಲ್ಲಿ ಏಪ್ರಿಲ್ 25 ರಂದು ಉದ್ಘಾಟಿಸಲಿದ್ದಾರೆ.ಈ ವೇಳೆಗೆ ಬೆದರಿಕೆ ಹಾಕಲಾಗಿತ್ತು.