ವಿವಿಧ ಇಲಾಖೆಗಳ ಮೂಲಕ ಜಾರಿಯಲ್ಲಿರುವ ಕೇಂದ್ರ ಸರ್ಕಾರದ ಅನುದಾನಿತ 61 ಯೋಜನೆಗಳಿಗೆ ಕೇಂದ್ರ ಸರ್ಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹಣ ಬಿಡುಗಡೆ ಮಾಡಿಲ್ಲ ಎಂದು ವರದಿಯಾಗಿದೆ.
ಒಟ್ಟು 23 ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳಿಸುತ್ತಿರುವ 61 ಯೋಜನೆಗಳಿಗೆ ಕಳೆದ ಸಾಲಿನಲ್ಲಿ ಅಂದ್ರೆ 2022-23ನೇ ಸಾಲಿನಲ್ಲಿ ಕೇಂದ್ರ ಒಟ್ಟು 10,447.91 ಕೋಟಿ ಅನುದಾನ ಬಿಡುಗಡೆ ಮಾಡಿತ್ತು.
ಆದರೆ ಈ ಪ್ರಸಕ್ತ ಸಾಲಿನಲ್ಲಿ ಆಗಸ್ಟ್ ತಿಂಗಳು ಕಳೆದರೂ ಹಣ ಬಿಡುಗಡೆ ಮಾಡಿಲ್ಲ ಎಂದು ವರದಿಯಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ ಘಟಕ, ಕರ್ನಾಟಕದ ಮೇಲೆ ದ್ವೇಷ ಸಾಧಿಸುವ ಪ್ರಧಾನಿ ಮೋದಿಯವರು ವಾಜಪೇಯಿಯವರು ಹೇಳಿದ್ದ ರಾಜಧರ್ಮದ ಪಾಠವನ್ನು ನೆನಪಿಸಿಕೊಳ್ಳಲಿ ಅಂತ ಹೇಳಿದೆ.
ಜೊತೆಗೆ ಈ ಹಿಂದೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಕೇಂದ್ರದ ಅನುದಾನ ನಿಲ್ಲಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬೆದರಿಕೆ ಹಾಕಿದ್ದರು.ಅದರಂತೆ ಇಂದು ನಡೆದುಕೊಳ್ಳುತ್ತಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯ 25 ಸಂಸದರ ಕೆಲಸವೇನು? ಕರ್ನಾಟಕಕ್ಕೆ ಆಗುತ್ತಿರುವ ಈ ಅನ್ಯಾಯವನ್ನು ಏಕೆ ಪ್ರಶ್ನಿಸುತ್ತಿಲ್ಲ?ಎಂದು ಪ್ರಶ್ನಿಸಿದ್ದಾರೆ.