ಬೆಂಗಳೂರು;ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆ ಕೋಮುವಾದಿ ಪಕ್ಷಗಳನ್ನು ಸೋಲಿಸುವ ಮೂಲಕ ರಾಜ್ಯದ ಜಾತ್ಯತೀತ, ಸಹಬಾಳ್ವೆಯ ಪರಂಪರೆಯನ್ನು ಮರಳಿ ಸ್ಥಾಪಿಸುವ ದಿಟ್ಟ ನಿರ್ಧಾರವನ್ನು ರಾಜ್ಯದ ಮತದಾರರು ಮಾಡಬೇಕಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಹೇಳಿದೆ.
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಡಾ ಮುಹಮ್ಮದ್ ಫಾಝಿಲ್ ರಝ್ವಿ, ಪ್ರ.ಕಾರ್ಯದರ್ಶಿ ಅಬೂಸುಫಿಯಾನ್ ಮದನಿ ಮತದಾರರಿಗೆ ಈ ಕುರಿತು ಜಂಟಿ ಹೇಳಿಕೆಯಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.
ಯಾವ ಕಾರಣಕ್ಕೂ ಕೋಮುವಾದಿಗಳು ಈ ರಾಜ್ಯವನ್ನು ಆಳಲು ಬಿಡಬಾರದೆಂದು ಮುಸ್ಲಿಂ ಜಮಾಅತ್ ರಾಜ್ಯದ ಮತದಾರರನ್ನು ವಿನಂತಿಸಿದ್ದು, ಸಂಘಟನೆಯ ಘಟಕಗಳಾದ SYS ಮತ SSF ಸಂಘಟನೆಯ ಲಕ್ಷಾಂತರ ಕಾರ್ಯಕರ್ತರು ‘ ಕೋಮುವಾದಿಗಳನ್ನು ಮತದಾನದಿಂದ ಸೋಲಿಸಿ’ ಎಂದು ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಈ ರಾಜ್ಯದ ಅಲ್ಪಸಂಖ್ಯಾತರು ಅನುಭವಿಸಿದ ಎಲ್ಲ ಕಡೆಗಣನೆ, ತಾರತಮ್ಯ, ನೋವುಗಳಿಗೆ ನಾವು ನೀಡುವ ಪ್ರತ್ಯುತ್ತರವೇ ಮತದಾನವಾಗಿದ್ದು ದಯವಿಟ್ಟು ಮತಗಳು ವಿಭಜನೆಯಾಗದಂತೆ ನೋಡಬೇಕಿದೆ ಎಂದು ಹೇಳಿದ್ದಾರೆ.
ರಾಜ್ಯದ ಎಲ್ಲಾ ಮತದಾನ ಕೇಂದ್ರಗಳಲ್ಲಿ ಗರಿಷ್ಠ ಮತದಾನ ನಡೆಯುವಂತೆ ಮತ್ತು ಮತ ವಿಭಜನೆ ನಡೆಯದಂತೆ ಮತದಾರರ ಜಾಗೃತಿ ನಡೆಸಲು ಸಂಘಟನೆಯ ಎಲ್ಲಾ ಘಟಕಗಳಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ಸೂಚಿಸಿದೆ.