ಹುಬ್ಬಳ್ಳಿ; ಬಿಜೆಪಿ ತೊರೆದು ಇತರ ನಾಯಕರು ಬೇರೆ- ಬೇರೆ ಪಕ್ಷಗಳಿಗೆ ಸೇರ್ಪಡೆಯಾಗಿದ್ದರೂ, ಬಿಜೆಪಿ ನಾಯಕರು ನನ್ನನ್ನು ಮಾತ್ರ ಸೋಲಿಸಲು ಮುಗಿಬಿದ್ದಿದ್ದಾರೆ ಎಂದು ಹುಬ್ಬಳ್ಳಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ, ಬಿ.ಎಸ್ ಯಡಿಯೂರಪ್ಪ, ಜೆ.ಪಿ ನಡ್ಡಾ, ಸ್ಮೃತಿ ಇರಾನಿ ಹೀಗೆ ಬಿಜೆಪಿ ನಾಯಕರು ಎಲ್ಲರೂ ಸೇರಿ ನನ್ನ ಸೋಲಿಸಲು ಪಣ ತೊಟ್ಟಿದ್ದಾರೆ. ಬಿಜೆಪಿ ನನ್ನನ್ನು ಸೋಲಿಸುವ ಅಭಿಯಾನ ನಡೆಸುತ್ತಿದೆ ಎಂದು ಹುಬ್ಬಳ್ಳಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಯನೂರ ಮಂಜುನಾಥ್, ಲಕ್ಷ್ಮಣ ಸವದಿ, ಎನ್.ಆರ್ ಸಂತೋಷ್ ಎಲ್ಲರೂ ಪಕ್ಷ ತೊರೆದಿದ್ದಾರೆ. ಆದರೆ ನಾನು ಪಕ್ಷ ತೊರೆದಿದ್ದನ್ನು ದೊಡ್ಡ ಅಪರಾಧ ಮಾಡಿದವನಂತೆ ನನ್ನ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ ಎಂದು ಹೇಳಿದ್ದಾರೆ.
ಬಿ.ಎಸ್ ಯಡಿಯೂರಪ್ಪ ಕೆಜೆಪಿ ಕಟ್ಟಿದ್ದರು. ಯಡಿಯೂರಪ್ಪ ಅವರ ಬೈಗುಳ, ಟೀಕೆಯನ್ನು ಆಶೀರ್ವಾದ ಎಂದು ತೆಗೆದುಕೊಂಡಿದ್ದೇನೆ. ಟಿಕೆಟ್ ಕೊಡಿಸುವುದಾಗಿ ಹೇಳಿ ಯಡಿಯೂರಪ್ಪ ಈಗ ಅಸಹಾಯಕರಾಗಿದ್ದಾರೆ. ಯಡಿಯೂರಪ್ಪ ಅವರ ಬೈಗುಳ ನನ್ನ ಗೆಲುವಿಗೆ ಅನುಕೂಲವಾಗಲಿದೆ. ನನಗೆ ಬೈದಷ್ಟು ನನ್ನ ಮೇಲೆ ಜನರ ಪ್ರೀತಿ, ವಿಶ್ವಾಸ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ನಾನು ದ್ರೋಹದ ಕೆಲಸ ಮಾಡಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಪಕ್ಷದಲ್ಲಿ ನನ್ನ ವಿರುದ್ಧ ಕುತಂತ್ರ ನಡೆದಿದೆ. ನೇರವಾಗಿ ನಾನು ಬಿ.ಎಲ್ ಸಂತೋಷ್ ಬಗ್ಗೆ ಟೀಕಿಸಿದ್ದು. ಆದರೆ ಅವರು ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ ಎಂದು ಶೆಟ್ಟರ್ ಹೇಳಿದ್ದಾರೆ.
ಶೆಟ್ಟರ್ ಗೆ ಸೋಲಿಸಿಯೇ ಸಿದ್ದ ಎಂದು ಈಗಗಾಲೇ ಬಿಎಸ್ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.ನಾಗಪುರದಿಂದ ಆರೆಸ್ಸೆಸ್ ತಂಡ ಶೆಟ್ಟರ್ ಗೆ ಸೋಲಿಸಲು ಹುಬ್ಬಳಿಗೆ ಬಂದಿದೆ ಎಂದು ಕೂಡ ಹೇಳಲಾಗಿದೆ.