ಹುಬ್ಬಳ್ಳಿ: ಹಳೆ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಇಬ್ಬರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಇರ್ಪಾನ ನಾಲತವಾಡ ಹಾಗೂ ಸಿಕಂದರ ಎಂಬವರಿಗೆ ಜಾಮೀನು ಸಿಕ್ಕಿದೆ.
2022ರ ಏ.17ರಂದು ಒಂದು ಸಮುದಾಯವನ್ನು ಕೆರಳಿಸುವ ರೀತಿಯಲ್ಲಿ ಪೋಸ್ಟ್ ವೈರಲ್ ಮಾಡಲಾಗಿತ್ತು.
ಇದನ್ನು ಖಂಡಿಸಿ ಮತ್ತೊಂದು ಕೋಮಿನವರು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯೆದುರು ಪ್ರತಿಭಟನೆ ನಡೆಸಿದ್ದರು. ಆಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಗಲಭೆಯಾಗಿತ್ತು.
ಪೊಲೀಸ್ ವಾಹನಗಳು ಜಖಂಗೊಂಡ ಹಿನ್ನೆಲೆಯಲ್ಲಿ ಒಟ್ಟು 156 ಜನರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಅಲ್ಲದೇ ಆರೋಪಿಗಳ ವಿರುದ್ಧ ದೇಶದ್ರೋಹದ ಕೇಸ್ ಹಾಕಲಾಗಿತ್ತು.
ಈ ಹಿಂದೆ ಎಂಐಎಂನ ಪಾಲಿಕೆ ಸದಸ್ಯ ನಜೀರ್ ಹೊನ್ಯಾಳ ಸಹಿತ 7 ಮಂದಿಗೆ ಜಾಮೀನು ಮಂಜೂರಾಗಿತ್ತು. ಈಗ ಸುಪ್ರೀಂಕೋರ್ಟ್ ಇಬ್ಬರಿಗೆ ಜಾಮೀನು ನೀಡಿದೆ.
ಬೆಂಗಳೂರಿನ ಕೊತ್ವಾಲ ಎಂಬ ನ್ಯಾಯವಾದಿಗಳು ತಮ್ಮ ಹಿರಿಯ ವಕೀಲರ ಮುಖಾಂತರ ಈ ಇಬ್ಬರ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.