ಬಂಗಾರದ ಮಾಂಗಲ್ಯ ಸರ ನುಂಗಿದ ಎಮ್ಮೆ; ಇದಕ್ಕೆ ಮಹಿಳೆ ಮಾಡಿದ್ದೇನು ಗೊತ್ತಾ?
ಮಹಾರಾಷ್ಟ್ರ; 25 ಗ್ರಾಂ ಬಂಗಾರದ ಮಾಂಗಲ್ಯ ಸರವನ್ನು ನುಂಗಿದೆ ಎಂದು ಎಮ್ಮೆಯ ಹೊಟ್ಟೆ ಕೊಯ್ದು ತಾಳಿಯನ್ನು ಹೊರತೆಗೆದಿರುವ ಘಟನೆ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ನಡೆದಿದೆ.
ಅಂದಾಜು 1.5 ಲಕ್ಷ ರೂ.ಮೌಲ್ಯದ ಮಂಗಳಸೂತ್ರವನ್ನು ಎಮ್ಮೆ ನುಂಗಿದೆ ಎಂದು ತಿಳಿದ ಕುಟುಂಬಸ್ಥರು ತಕ್ಷಣ ಅದನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಘಟನೆಯ ವೀಡಿಯೊವನ್ನು ಎಎನ್ಐ ಎಕ್ಸ್ನಲ್ಲಿ ಹಂಚಿಕೊಂಡಿದೆ. ವಶಿಮ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಕುರಿತು ಎಎನ್ಐ ಜೊತೆ ಮಾತನಾಡಿದ ಪಶುವೈದ್ಯ ಬಾಳಾಸಾಹೇಬ, ಎಮ್ಮೆಯನ್ನು ಲೋಹಶೋಧಕದಿಂದ ತಪಾಸಣೆ ಮಾಡಲಾಯಿತು. ಈ ವೇಳೆ ಎಮ್ಮೆಯ ಹೊಟ್ಟೆಯಲ್ಲಿ ಮಾಂಗಲ್ಯ ಪತ್ತೆಯಾಗಿದ್ದು, 2 ಗಂಟೆಗಳ ಶಸ್ತ್ರ ಚಿಕಿತ್ಸೆಯ ಬಳಿಕ ಹೊರತೆಗೆಯಲಾಗಿದೆ. ಎಮ್ಮೆಯ ಹೊಟ್ಟೆಗೆ 60-65 ಹೊಲಿಗೆ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವರದಿಯ ಪ್ರಕಾರ, ಗೀತಾ ಎನ್ನುವರು ತಾಳಿಯನ್ನು ಒಂದು ಬುಟ್ಟಿಯಲ್ಲಿ ಇಟ್ಟು ಹೋಗಿದ್ದರು. ಸ್ನಾನದಿಂದ ಬಂದ ನಂತರ ತಾಳಿಗಾಗಿ ಹುಡುಕಾಟ ನಡೆಸಿದರು. ಆಮೇಲೆ ಅವರು ಸೋಯಾ ಬೀನ್ ಸಿಪ್ಪೆ, ಕಡಲೆಕಾಯಿ ಸಿಪ್ಪೆ ಇಟ್ಟಿದ್ದ ಬುಟ್ಟಿಯಲ್ಲಿ ತಾಳಿಯನ್ನು ಇಟ್ಟು ಹೋಗಿರುವುದು ಮನವರಿಕೆಯಾಗಿದೆ. ಈ ಹಿನ್ನೆಲೆ ಎಮ್ಮೆಯನ್ನು ಆಸ್ಪತ್ರೆಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮಾಡಲಾಗಿದೆ.