ಕಾರವಾರ:ಪ್ರೀತಿಸಿ, ದೈಹಿಕ ಸಂಪರ್ಕ ನಡೆಸಿ ವಿವಾಹಕ್ಕೆ ನಿರಾಕರಿಸಿದ ಯುವಕನ ಮನೆಮುಂದೆ ಸಂತ್ರಸ್ತ ಯುವತಿ ಧರಣಿ ಕುಳಿತಿರುವ ಘಟನೆ ಮುಂಡಗೋಡ ತಾಲೂಕಿನ ಮೈನಳ್ಳಿಯಲ್ಲಿ ನಡೆದಿದೆ.
ಹಿರೇಕೆರೂರು ತಾಲೂಕಿನ ಕಾಂಡೇಬಾಗೂರ್ ಗ್ರಾಮದ ಗಿರಿಜಾ ಪರಮೇಶ್ ಲಮಾಣಿ (19) ಪ್ರತಿಭಟನೆ ಮಾಡುತ್ತಿರುವ ಯುವತಿ.
ಪ್ರಸಾದ್ ಪ್ರಕಾಶ್ ಕಲಾಲ್ ಬದಂಕರ್ (22) ಎಂಬ ಯುವಕ ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ತರಬೇತಿಗೆ ತೆರಳಿದ್ದಾಗ ಗಿರಿಜಾಗೆ ಪರಿಚಯವಾಗಿದ್ದು, ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ.
ಇದಲ್ಲದೆ ಇಬ್ಬರೂ ಜೊತೆಯಲ್ಲೇ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿದ್ದರು.ಬೆಂಗಳೂರಿನಲ್ಲಿ ಒಂದೇ ರೂಂನಲ್ಲಿದ್ದರು.ಆದರೆ ಇದೀಗ ವಿವಾಹವಾಗು ಎಂದಾಗ ನಾನು ಟೈಂ ಪಾಸ್ ಮಾಡಿದ್ದು ಎಂದು ಹೇಳಿ ಯುವಕ ಕೈಕೊಟ್ಟಿದ್ದಾನೆ.
ಇದರಿಂದ ನೊಂದ ಯುವತಿ ಪ್ರೀತಿಸಿದ ಯುವಕನನ್ನು ಬಿಟ್ಟು ಇರಲಾರೆ, ಪ್ರಸಾದ್ ಜತೆ ಮದುವೆ ಮಾಡಿಸಿಕೊಡಿ ಎಂದು ಆತನಿಗೆ ಹುಡುಕಿಕೊಂಡು ಮುಂಡಗೋಡ ತಾಲೂಕಿನ ಮೈನಳ್ಳಿಗೆ ಬಂದಿದ್ದಾಳೆ.
ಆತನನ್ನು ಹುಡುಕಿಕೊಂಡು ಮುಂಡಗೋಡ ಪೊಲೀಸ್ ಠಾಣೆಗೆ ತೆರಳಿದ್ದ ಗಿರಿಜಾಗೆ ಪೊಲೀಸರು ಬುದ್ಧಿವಾದ ಹೇಳಿ ವಾಪಸ್ ಕಳುಹಿಸಿದ್ದಾರೆ.ಪೊಲೀಸರಿಂದ ಯಾವುದೇ ನ್ಯಾಯ ದೊರೆಯದಿದ್ದಾಗ ಯುವಕನ ಮನೆಯ ಮುಂದೆಯೇ ಯುವತಿ ಧರಣಿ ಕುಳಿತಿದ್ದಾಳೆ.
ಪ್ರಸಾದ್ ಮನೆಯ ಮುಂದೆ ಗಿರಿಜಾ ನಿನ್ನೆಯಿಂದ ಪ್ರತಿಭಟನೆ ನಡೆಸುತ್ತಿದ್ದು, ಆಕೆಗೆ ಪೊಲೀಸ್ ಇಲಾಖೆ ನೆರವು ನೀಡಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.