ಡಿ.ಜಿಹಳ್ಳಿ, ಕೆ.ಜಿ.ಹಳ್ಳಿ ಪ್ರಕರಣ; ಶಾಸಕ ತನ್ವೀರ್ ಸೇಠ್ ಗೃಹ ಸಚಿವರಿಗೆ ಬರೆದ ಪತ್ರಕ್ಕೆ ಬಿಜೆಪಿ ವಿರೋಧ; ಏನಿದು ವಿವಾದ?

ಬೆಂಗಳೂರು;ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಅವರಿಗೆ ಪತ್ರ ಬರೆದಿರುವ ಕುರಿತಾಗಿ ಪ್ರತಿಕ್ರಿಯಿಸಿದ ಶಾಸಕ ತನ್ವೀರ್ ಶೇಠ್, ನಾನು ಯಾವುದೇ ಒಂದು ಕೋಮಿನ ವಿಚಾರದಲ್ಲಿ ಪತ್ರ ಬರೆದು ಪ್ರಸ್ತಾಪ ಮಾಡಿಲ್ಲ. ಅಮಾಯಕರನ್ನು ದಸ್ತಗಿರಿ ಮಾಡಿ ಶಿಕ್ಷೆ ನೀಡಿರುವ ವಿಚಾರವಾಗಿ ಪ್ರಸ್ತಾಪ ಮಾಡಿದ್ದೇನೆ ಎಂದರು.




ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕೂಡ ನಾನು ಮನವಿ ಮಾಡಿಕೊಂಡಿದ್ದೆ.ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದಲ್ಲಿ ಅಮಾಯಕರು ಬಂಧನದಲ್ಲಿದ್ದರೆ ಬಿಡುಗಡೆ ಮಾಡಿ ಎಂದು ಪತ್ರ ಬರೆದಿದ್ದೇನೆ. ಪತ್ರ ಬರೆದಿದ್ದು ನಿಜ. ಆದರೆ ಒಂದು ಕೋಮಿನ ಬಗ್ಗೆ ಉಲ್ಲೇಖಿಸಿ ಪತ್ರ ಬರೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಗೃಹ ಸಚಿವ ಜಿ.ಪರಮೇಶ್ವರ್ ​ಅವರಿಗೆ ಪತ್ರ ಬರೆದಿರುವ ಶಾಸಕರು, ಡಿಜೆ ಹಳ್ಳಿ , ಕೆಜಿ ಹಳ್ಳಿ , ಶಿವಮೊಗ್ಗ ಹುಬ್ಬಳ್ಳಿ ಸೇರಿ ಹಲವೆಡೆ ಅಮಾಯಕರು, ವಿದ್ಯಾರ್ಥಿಗಳು ಬಂಧಿತರಾಗಿದ್ದಾರೆ.ಸುಳ್ಳು ಮೊಕದ್ದಮೆ ಹೂಡಿ ಅವರನ್ನು ಬಂಧಿಸಲಾಗಿದೆ. ಸದರಿ ಮೊಕದಮ್ಮೆಯನ್ನು ಮರು ಪರಿಶೀಲಿಸಿ ಅವರನ್ನು ಬಿಡುಗಡೆ ಮಾಡಲು ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಸ್ಪಂದಿಸಿರುವ ಗೃಹ ಸಚಿವ ಪರಮೇಶ್ವರ್, ಈ ಸಂಬಂಧ ಮರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರಿಗೆ ಟಿಪ್ಪಣಿ ಬರೆದಿದ್ದಾರೆ.

ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಘಟನೆಗೆ ಸಂಬಂಧಿಸಿದಂತೆ ಅಮಾಯಕರಿಗೆ ತೊಂದರೆಯಾಗಿದ್ದರೆ ಪರಿಶೀಲಿಸಬೇಕಾಗುತ್ತದೆ.ಶಾಸಕರು ಪತ್ರ ಮುಖೇನ ಗೃಹ ಸಚಿವರಿಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಘಟನೆ ಸಂಬಂಧ ಕಾನೂನಿನಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ, ಗೃಹ ಇಲಾಖೆಯು ಪರಿಶೀಲನೆ ನಡೆಸಿ ಕಾನೂನು ಪ್ರಕಾರವೇ ಕ್ರಮ ವಹಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.




ಟಾಪ್ ನ್ಯೂಸ್