ಬೆಂಗಳೂರು:ಬಿಜೆಪಿಯನ್ನು ಸೋಲಿಸಲು ಮಹಾ ಘಟಬಂಧನ್ ನಾಯಕರು ಬೆಂಗಳೂರಲ್ಲಿ ಇಂದಿನಿಂದ ಒಗ್ಗಟ್ಟು ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.ಪಾಟ್ನಾದಲ್ಲಿ ಕಳೆದ ತಿಂಗಳು ಪ್ರತಿಪಕ್ಷಗಳ ಸಭೆ ನಡೆದಿತ್ತು.
ಸಭೆಯಲ್ಲಿ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಹಾದಿಯಾಗಿ ಘಟಾನುಘಟಿ ನಾಯಕರೇ ಭಾಗಿಯಾಗಲಿದ್ದಾರೆ.
ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷಗಳ ಸಭೆಗೆ ತಮ್ಮ ಪಕ್ಷಕ್ಕೆ ಆಹ್ವಾನ ನೀಡಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಜೆಡಿಎಸ್ ಗೆ ಜಾತ್ಯತೀತ ರಾಜಕೀಯದಲ್ಲಿ ನಿಜವಾಗಿ ನಂಬಿಕೆಯಿಲ್ಲ ಎಂಬುದು ನಮಗೆ ತಿಳಿದಿದೆ.
ಅವರು ಹಿಂದೆಯೂ ಕೂಡಾ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ.ಹಾಗಾಗಿ ಇದೇನೂ ಹೊಸದಲ್ಲ. ಜನತಾ ದಳ ಜಾತ್ಯತೀತ ಎಂಬ ಟ್ಯಾಗ್ ತೆಗೆಯಬೇಕಾದ ಅಗತ್ಯವಿದೆ ಎಂದರು.
ಜೆಡಿಎಸ್ ಗೆ ಯಾವುದೇ ತತ್ವ, ಸಿದ್ಧಾಂತಗಳಿಲ್ಲ. ಕುಮಾರಸ್ವಾಮಿ ಅವರಿಗೆ ಅಧಿಕಾರ ಮಾತ್ರ ಮುಖ್ಯ. ಇದು ಕರ್ನಾಟಕದಲ್ಲಿ ಜೆಡಿ(ಎಸ್) ಮೇಲೆ ಆಳವಾದ ಪರಿಣಾಮ ಬೀರಲಿದ್ದು, ಅಂತ್ಯವೂ ಆಗಬಹುದು ಎಂದೆನಿಸುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.