ಹಿಂದೂ ರಾಷ್ಟ್ರ ನಿರ್ಮಿಸಲು ಹಿಂದೂಗಳು ಒಗ್ಗಟ್ಟಾಗಿ ಎಂದ ಕಾಂಗ್ರೆಸ್ ಶಾಸಕಿ;ವಿವಾದ ಸೃಷ್ಟಿ ಬೆನ್ನಲ್ಲೇ ಈ ಬಗ್ಗೆ ಕಾಂಗ್ರೆಸ್ ಹೇಳಿದ್ದೇನು?
ಛತ್ತೀಸ್ಗಢ; ಕಾಂಗ್ರೆಸ್ ಶಾಸಕಿ ಅನಿತಾ ಯೋಗೇಂದ್ರ ಶರ್ಮಾ ಹಿಂದೂ ರಾಷ್ಟ್ರ ರಚನೆಯ ಬಗ್ಗೆ ಹೇಳಿಕೆ ಕೊಟ್ಟ ನಂತರ ವಿವಾದಕ್ಕೆ ಸಿಲುಕಿದ್ದಾರೆ.ಈ ಹೇಳಿಕೆಗಳು ಪಕ್ಷದ ಮುಖಂಡರೊಂದಿಗೆ ಚರ್ಚೆಗೆ ಕಾರಣವಾಗಿವೆ.
ಸಂವಿಧಾನ ಮತ್ತು ಜಾತ್ಯತೀತತೆಯ ಮೇಲೆ ಪ್ರತಿಜ್ಞೆ ಮಾಡಬೇಕೆಂದು ಕಾಂಗ್ರೆಸ್ ಶಾಸಕಿಗೆ ಒತ್ತಾಯಿಸಿದೆ ಮತ್ತು ಟೀಕೆಗಳು ಅವರ “ವೈಯಕ್ತಿಕ ದೃಷ್ಟಿಕೋನಗಳು” ಎಂದು ಕಾಂಗ್ರೆಸ್ ಹೇಳಿದೆ.
ನಾವು ಎಲ್ಲೇ ಇರಲಿ, ಅದು ಹಳ್ಳಿಯಾಗಿರಲಿ ಅಥವಾ ಯಾವುದೇ ಸ್ಥಳದಲ್ಲಿರಲಿ ನಾವು ಹಿಂದೂಗಳಿಗಾಗಿ ಪ್ರತಿಜ್ಞೆ ಮಾಡಬೇಕು ಮತ್ತು ಮಾತನಾಡಬೇಕು. ನಾವು ಹಿಂದೂಗಳು ಒಗ್ಗೂಡಿದಾಗ ಮಾತ್ರ ಹಿಂದೂ ರಾಷ್ಟ್ರವನ್ನು ರಚಿಸಬಹುದು” ಎಂದು ಧಾರಶಿವಾ ಶಾಸಕಿ ಅನಿತಾ ಯೋಗೇಂದ್ರ ಶರ್ಮಾ ಸ್ಥಳೀಯ ಭಾಷೆಯಲ್ಲಿ ಹೇಳಿದ್ದಾರೆ. ಪುರಿ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರ ಜನ್ಮದಿನದ ಅಂಗವಾಗಿ ರಾಯ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಹೇಳಿಕೆ ಹೊರ ಬಂದಿದೆ.
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಶರ್ಮಾ “ಹಿಂದೂ ರಾಷ್ಟ್ರ ಮಾಡಲು ಪ್ರತಿಜ್ಞೆ ಮಾಡುವಂತೆ” ಒತ್ತಾಯಿಸಿದ್ದಾರೆ.
ಆದರೆ ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ನಂತರ ಸುದ್ದಿಗಾರರಿಗೆ ತಿಳಿಸಿದರು. “ನಾನು ದೇಶದಲ್ಲಿ ವಾಸಿಸುವ ಜನರ ಏಕತೆಯ ಬಗ್ಗೆ ಮಾತ್ರ ಮಾತನಾಡುತ್ತಿದ್ದೆ” ಎಂದು ಅವರು ಹೇಳಿದರು.
ಶರ್ಮಾ ಹೇಳಿಕೆಗೆ ಪ್ರತಿಕ್ರಿಯಿಸಿದ ಭಾರತೀಯ ಜನತಾ ಪಕ್ಷದ ವಕ್ತಾರ ಕೇದಾರ್ ಗುಪ್ತಾ, ಹಿಂದೂ ರಾಷ್ಟ್ರ ಮತ್ತು ರಾಮರಾಜ್ಯದ ಬಗ್ಗೆ ಮಾತನಾಡಲು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನೈತಿಕತೆ ಇಲ್ಲ.ಏಕರೂಪ ನಾಗರಿಕ ಸಂಹಿತೆಗೆ ಅವರು ಬೆಂಬಲಿಸುವರೇ? ಕಾಂಗ್ರೆಸ್ ಹೇಳುವುದು ಹಾಗೂ ಮಾಡುವುದರ ನಡುವೆ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.