ಬೆಂಗಳೂರು;ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಇಂದು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣವಚನ ಸ್ವೀಕರದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕದ ಜನರ ಆಶೀರ್ವಾದಿಂದ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
ರಾಹುಲ್ ಗಾಂಧಿ, ಖರ್ಗೆ, ಪ್ರಿಯಾಂಕಾ ಸೇರಿ ಅನೇಕರು ಪ್ರಚಾರ ಮಾಡಿದ್ದಾರೆ.ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಿದ ಎಲ್ಲರಿಗೂ ಧನ್ಯವಾದಗಳು. ಜನರಿಗೆ ನಾವು ಕೊಟ್ಟ ಭರವಸೆಗಳಾದ ಐದು ಗ್ಯಾರಂಟಿಗಳಿಗೆ ಇಂದೇ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಆದೇಶ ಹೊರಡಿಸುವ ಮೂಲಕ ಜಾರಿಗೆ ತರುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಪ್ರಮಾಣ ವಚನ ಸಮಾರಂಭದ ನಂತರ ಜನರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನಾವು ನಿಮಗೆ 5 ಭರವಸೆಗಳನ್ನು ನೀಡಿದ್ದೇವೆ, ನಾವು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ, ನಾವು ನುಡಿದಂತೆ ನಡೆದು ತೋರಿಸುತ್ತೇವೆ.ಇನ್ನೆರಡು ಗಂಟೆಗಳಲ್ಲಿ ಸರಕಾರದ ಮೊದಲ ಸಂಪುಟ ಸಭೆ ನಡೆಯಲಿದೆ.ಸಭೆಯಲ್ಲಿ ಎಲ್ಲಾ 5 ಗ್ಯಾರೆಂಟಿಗಳನ್ನು ಜಾರಿಗೆ ತರುವುದಾಗಿ ಹೇಳಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ನೀವು ಅನುಭವಿಸಿದ ಕಷ್ಟ ನಿಮಗೆ ಗೊತ್ತಿದೆ. ಕರುನಾಡಿನ ಜನರು ನಮ್ಮ ಪರವಾಗಿ ನಿಂತು ಅಧಿಕಾರ ನೀಡಿದ್ದಕ್ಕೆ ಧನ್ಯವಾದಗಳು. ನಮ್ಮ ಜೊತೆಯಲ್ಲಿ ಸತ್ಯ ಮತ್ತು ಬಡವರಿದ್ದರು. ಆದರೆ ಬಿಜೆಪಿ ಜೊತೆ ಶ್ರೀಮಂತರು, ಪೊಲೀಸರಿದ್ದರು ಎಂದು ರಾಹುಲ್ ಹೇಳಿದರು.
ಇಂದು ಭ್ರಷ್ಟಾಚಾರ, ಅಹಂಕರ, ದ್ವೇಷ ರಾಜಕಾರಣಕ್ಕೆ ಕರ್ನಾಟಕದ ಜನರು ಉತ್ತರ ನೀಡಿದ್ದಾರೆ. ಕಾಂಗ್ರೆಸ್ಗೆ ಮತ ನೀಡುವ ಮೂಲಕ ಕರ್ನಾಟಕದ ಜನರು ರಾಜ್ಯದಲ್ಲಿ ಪ್ರೀತಿಯ ಅಂಗಡಿಗಳನ್ನು ತೆರೆದಿದ್ದಾರೆ.ನಿಮಗೆ ಧನ್ಯವಾದಗಳು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.