ಬೆಂಗಳೂರು;ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡುತ್ತಿದ್ದ ಸಿಎಂ ಬೊಮ್ಮಾಯಿಗೆ ವ್ಯಕ್ತಿಯೊಬ್ಬ ಹಿಗ್ಗಾಮುಗ್ಗಾ ತರಾಟೆಗೈದ ಘಟನೆಯ ವಿಡಿಯೋ ವೈರಲ್ ಆಗಿದೆ.
ನೆಲಮಂಗಲದಲ್ಲಿ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಶಂಕರ್ ನಾಯಕ್ ಪರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಚಾರ ಮಾಡುವಾಗ ಘಟನೆ ನಡೆದಿದೆ ಎನ್ನಲಾಗಿದೆ.
ಸಿಎಂ ಭಾಷಣ ಮಾಡುತ್ತಿದ್ದಾಗ ಮುಂಭಾಗದಲ್ಲಿದ್ದ ವ್ಯಕ್ತಿ ಬೆಲೆಯೇರಿಕೆ ಏಕೆ ಆಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ನೆಲಮಂಗಲದ ಐಬಿಯಿಂದ ಸಿಎಂ ರೋಡ್ ಶೋನಲ್ಲಿ ಘಟನೆ ನಡೆದಿದೆ.ಈ ವೇಳೆ ಸಚಿವ ಸುಧಾಕರ್ ಕೂಡ ಸಾಥ್ ನೀಡಿದ್ದರು.
ವಿಡಿಯೋದಲ್ಲಿ ವ್ಯಕ್ತಿ,ದಿನದಿಂದ ದಿನಕ್ಕೆ ಪ್ರತಿಯೊಂದು ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ. ನಾವು ಬಡವರು. ಗ್ಯಾಸ್ ಬೆಲೆ ಏರಿಕೆಯಾಗಿದೆ. ನಾವು ವೋಟು ಹಾಕ್ತೀವಿ. ನಮ್ಮ ಹಕ್ಕು ಕೇಳುತ್ತೇವೆ. ಎಂದು ಸಿಟ್ಟಿಗೆದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಆತನನ್ನು ನಿಯಂತ್ರಿಸಲು ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರು ಹರಸಾಹಸ ಪಟ್ಟಿದ್ದಾರೆ.ಈ ಕುರಿತ ವಿಡಿಯೊ ಇದೀಗ ಭಾರೀ ವೈರಲ್ ಆಗಿದೆ.