ಬೆಂಗಳೂರು; ಆತ್ಮಹತ್ಯೆ ಯತ್ನ ಮಾಡಿರುವ ಕೆಎಸ್ಆರ್ಟಿಸಿ ಚಾಲಕನ ಜೀವಕ್ಕೆ ಏನಾದ್ರೂ ಹೆಚ್ಚುಕಮ್ಮಿಯಾದ್ರೆ ಹೆಚ್.ಡಿ. ಕುಮಾರಸ್ವಾಮಿ ನೇರ ಹೊಣೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಕುಮಾರಸ್ವಾಮಿ ಅಧಿಕಾರ ಸಿಕ್ಕಿಲ್ಲ ಎಂದು ಏನೇನೊ ಮಾತನಾಡುತ್ತಿದ್ದಾರೆ. ಚಾಲಕನನ್ನು ದೂರದ ಜಿಲ್ಲೆಗೆ ವರ್ಗಾವಣೆ ಮಾಡಿರಲಿಲ್ಲ. ಕೇವಲ 30 ಕಿ.ಮಿ. ದೂರದ ನಾಗಮಂಗಲದಿಂದ ಮಂಡ್ಯಕ್ಕೆ ವರ್ಗಾವಣೆ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಚಾಲಕನ ಜೀವಕ್ಕೆ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಕುಮಾರಸ್ವಾಮಿ ನೇರ ಹೊಣೆ. ಆತ ವಿಷ ಕುಡಿದಾಗ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ರು. ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲು ಸಂಬಂಧಿಕರು ಮುಂದಾಗಿದ್ದರು. ಆದರೆ, ಕುಮಾರಸ್ವಾಮಿ ಬೇಡ ಅಂತ ತಡೆದಿದ್ದಾರೆ. ಇದು ಅಪರಾಧ ಅಲ್ಲವೇ? ಆತನಿಗೆ ಚಿಕಿತ್ಸೆ ತಡವಾಗಿರುವುದಕ್ಕೆ ಕುಮಾರಸ್ವಾಮಿ ನೇರ ಕಾರಣ ಎಂದು ವಾಗ್ದಾಳಿ ನಡೆಸಿದರು.