ಬೆಂಗಳೂರು;ಇಂದು 24 ಶಾಸಕರು ಸಿದ್ದರಾಮಯ್ಯ ಸರಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಆದರೆ ಸಚಿವರಾಗುತ್ತಾರೆ ಎಂದು ಹೇಳಲಾಗುತ್ತಿದ್ದ ಬಿಕೆ ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ಕೈತಪ್ಪಿತ್ತು.ಆ ಬಳಿಕ ಹರಿಪ್ರಸಾದ ಅವರು ಅಸಮಾಧಾನಗೊಂಡಿದ್ದು, ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಹೇಳಲಾಗಿತ್ತು.ಆದರೆ ಈ ಬಗ್ಗೆ ಬಿಕೆ ಹರಿಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಕೆ ಹರಿಪ್ರಸಾದ್, ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ. ನಾನೆಂದೂ ಸಚಿವ ಸ್ಥಾನ ಬೇಕು ಎಂದು ಕೇಳಿದವನಲ್ಲ, ರಾಜೀನಾಮೆ ಕೊಡುತ್ತೇನೆ ಎಂದು ಎಲ್ಲೂ ಹೇಳಿಲ್ಲ, ಅದೆಲ್ಲ ವಾಟ್ಸಾಪ್ ಯೂನಿವರ್ಸಿಟಿ ಸೃಷ್ಟಿ ಎಂದು ಸ್ಪಷ್ಟಪಡಿಸಿದ್ದಾರೆ
ನಾನು ಕಾಂಗ್ರೆಸ್ ನ ನಿಷ್ಟಾವಂತ ಕಾರ್ಯಕರ್ತ, ಸ್ವಂತ ಮನೆಯಲ್ಲಿ ಇರುವವನು, ಈ ಮನೆ ಬಿಟ್ಟು ಹೋಗೋದಕ್ಕೆ ಅಥವಾ ಅದನ್ನು ಧ್ವಂಸ ಮಾಡೋದಕ್ಕೆ ಬಾಡಿಗೆ ಮನೆಯಿಂದ ಬಂದವನಲ್ಲ ಎಂದು ಹೇಳಿದ್ದಾರೆ.
ನಾನೂ ಕಾಂಗ್ರೆಸ್ ಪಕ್ಷ ಕಟ್ಟಿದವನು. ನಾನು ಯೋಚನೆ ಮಾಡುವ ಸಾಮಾಜಿಕ ನ್ಯಾಯ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಸಿಗಬೇಕು. ಎಲ್ಲರಿಗೂ ಸಮಾನ ಹಕ್ಕಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ನಾನು ಅಹಿಂದ ಅಂತ ಯೋಚನೆ ಮಾಡುವವನಲ್ಲ, ನಾನು ಕಾಂಗ್ರೆಸ್ನ ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟುಕೊಂಡವನು ಎಂದು ಬಿಕೆ ಹರಿಪ್ರಸಾದ್ ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.