ಕಾಂಗ್ರೆಸ್ ಹೇಳಿದೆ ಬಿಲ್ ಕಟ್ಟಲ್ಲ ಎಂದು ಕರೆಂಟ್ ಬಿಲ್ ವಸೂಲಿಗೆ ಹೋದ ಲೈನ್ ಮ್ಯಾನ್ ಗೆ ಚಪ್ಪಲಿಯಿಂದ ಹಲ್ಲೆ; 6 ತಿಂಗಳಿನಿಂದ ಬಿಲ್ ಕಟ್ಟದ ಆಸಾಮಿಯಿಂದ ಕೃತ್ಯ!
ಕೊಪ್ಪಳ;ವಿದ್ಯುತ್ ಬಿಲ್ ವಸೂಲಿಗೆ ಬಂದ ಲೈನ್ಮ್ಯಾನ್ ಮೇಲೆ ವ್ಯಕ್ತಿಯೊಬ್ಬ ಅವಾಚ್ಯ ಶಬ್ದದಿಂದ ನಿಂದಿಸಿ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿರುವ ಆರೋಪ
ಕುಕನಪಲ್ಲಿ ಗ್ರಾಮದಿಂದ ವರದಿಯಾಗಿದೆ.
ಕಳೆದ ಆರು ತಿಂಗಳಿನಿಂದ ಚಂದ್ರಶೇಖರಯ್ಯ ಎಂಬುವವರು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರು.ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಬಿಲ್ ವಸೂಲಾತಿಗೆಂದು ಅವರ ಮನೆಗೆ ಲೈನ್ಮ್ಯಾನ್ ಮಂಜುನಾಥ್ ಎಂಬುವರು ತೆರಳಿದ್ದರು.
ಬಿಲ್ ಪಾವತಿಸುವಂತೆ ಚಂದ್ರಶೇಖರಯ್ಯ ಅವರನ್ನು ಲೈನ್ ಮ್ಯಾನ್ ಕೇಳಿದಾಗ, ಆತ ನಾನು ಯಾವುದೇ ಕಾರಣಕ್ಕೂ ವಿದ್ಯುತ್ ಬಿಲ್ ಕಟ್ಟುವುದಿಲ್ಲ. ವಿದ್ಯುತ್ ಉಚಿತ ಅಂತ ಹೇಳಿದ್ದಾರೆ ಎಂದು ವಾಗ್ವಾದಕ್ಕೆ ಇಳಿದಿದ್ದಾನೆ.
ಸರ್ಕಾರ ಇನ್ನು ಅಧಿಕೃತವಾಗಿ ಜಾರಿ ಮಾಡಿಲ್ಲ. ಜಾರಿ ಮಾಡಿದ ಬಳಿಕ ನೋಡೋಣ, ಸದ್ಯಕ್ಕೆ ಹಳೆಯ ಬಿಲ್ ನ್ನು ಪಾವತಿಸಿ ಎಂದು ಮಂಜುನಾಥ್ ಕೇಳಿದ್ದಾರೆ.ಈ ವೇಳೆ
ಚಂದ್ರಶೇಖರಯ್ಯ ಅವಾಚ್ಯ ಶಬ್ದಗಳಿಂದ ಮಂಜುನಾಥ್ರನ್ನು ನಿಂದಿಸಿದ್ದಾರೆ.
ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಮಂಜುನಾಥ್ ಮೇಲೆ ಚಂದ್ರಶೇಖರಯ್ಯ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆ ನಡೆಸಿದ ಚಂದ್ರಶೇಖರಯ್ಯ ವಿರುದ್ಧ ಮಂಜುನಾಥ್ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ 200 ಯುನಿಟ್ ವಿದ್ಯುತ್ ಉಚಿತ ನೀಡುವುದಾಗಿ ಭರವಸೆ ನೀಡಿದ್ದರು.ನೂತನ ಸಿದ್ದರಾಮಯ್ಯ ಸರಕಾರ ಈ ಗ್ಯಾರೆಂಟಿಗೆ ಸಂಪುಟದಲ್ಲಿ ಒಪ್ಪಿಗೆ ನೀಡಿದೆ.ಇದರ ಜಾರಿ ಪ್ರಕ್ರಿಯೆ ಮುಂದುವರಿದಿದೆ.
ಈ ಮಧ್ಯೆ 6 ತಿಂಗಳು ಬಿಲ್ಕಟ್ಟದೆ ಈಗ ಲೈನ್ ಮ್ಯಾನ್ ಗೆ ವ್ಯಕ್ತಿ ಹಲ್ಲೆ ನಡೆಸಿರುವುದು ದುರ್ವರ್ತನೆಯೇ ಸರಿ.