ಮೂಡಿಗೆರೆ ಬಣಕಲ್ ಬಳಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಸಿಕ್ಕ ಕೇಸ್ ಗೆ ಟ್ವಿಸ್ಟ್, ಬಂಟ್ವಾಳದ ಯುವಕನ ಕೊಲೆ ಮಾಡಿ ಎಸೆದ ದುಷ್ಕರ್ಮಿಗಳು?

-ಸವಾದ್ ಮೃತದೇಹ ಎನ್ನುವ ಶಂಕೆ ವ್ಯಕ್ತವಾಗಿದೆ

ಬಂಟ್ವಾಳ:ಮೂಡಿಗೆರೆ ತಾಲೂಕು ಬಣಕಲ್ ಠಾಣಾ ವ್ಯಾಪ್ತಿಯ ದೇವರಮನೆ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಪತ್ತೆಯಾದ ಕೊಳೆತ ಮೃತದೇಹಕ್ಕೆ ಸಂಬಂಧಿಸಿ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ.

ಬಣಕಲ್ ನಲ್ಲಿ ಸಿಕ್ಕಿದ ಕೊಳೆತ ಶವ ಬಂಟ್ವಾಳ ತಾಲೂಕು ಇರಾ ಗ್ರಾಮದ ಕಾಫಿಕಾಡ್ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಸವಾದ್ (35) ಎಂಬವರದ್ದು ಎಂಬುವ ಶಂಕೆ ಮೂಡಿದೆ.

ಮೃತದೇಹದ ಗುರುತು ಸಿಗದಂತೆ ಮುಖಕ್ಕೆ ಬೆಂಕಿಹಚ್ಚಿ ಸುಟ್ಟು ಹಾಕಲಾಗಿದ್ದು, ಮಾದಕ ವ್ಯಸನಿಗಳ ತಂಡ ಈ ಕೊಲೆಗೈದಿದೆ ಎನ್ನಲಾಗುತ್ತಿದೆ. ಗಾಂಜಾ ವ್ಯವಹಾರದಲ್ಲಿ ಮನಸ್ತಾಪದ ಹಿನ್ನೆಲೆ ಈ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಕೊಲೆಗೈದ ಹಂತಕರ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆಂದು ವರದಿಯಾಗಿದೆ.

ಸವಾದ್ ಎಂಬಾತನನ್ನು ಆರೋಪಿಗಳು ಪೆಟ್ರೋಲ್ ಸುರಿದು ಕೊಲೆ ಮಾಡಿದ ಬಳಿಕ ಚಿಕ್ಕಮಗಳೂರು ಮೂಡಿಗೆರೆಯ ಬಣಕ್ಕಲ್ ಎಂಬಲ್ಲಿ ಗುಡ್ಡದಲ್ಲಿ ಬಿಸಾಡಿ ಹೋಗಿದ್ದಾರೆ ಎನ್ನಲಾಗುತ್ತಿದೆ. ಸವಾದ್ ಅವರಿಗೆ ಮದುವೆಯಾಗಿದ್ದು, ಬಳಿಕ ಪತ್ನಿಯಿಂದ ದೂರವಿದ್ದರು ಎನ್ನಲಾಗಿದೆ.

ಗಾಂಜಾ ವಿಚಾರಕ್ಕೆ ಸಂಬಂಧಿಸಿದಂತೆ ಇವರೊಳಗೆ ಹಣಕಾಸಿನ ಅಥವಾ ಗಾಂಜಾ ವಿಚಾರದಲ್ಲಿ ವೈಮಸ್ಸು ಉಂಟಾಗಿ ಈತನನ್ನು ಸುಮಾರು ಹತ್ತು ದಿನಗಳ ಹಿಂದೆ ಇರಾದಿಂದ ಕಿಡ್ನಾಪ್ ಮಾಡಿ ಬಳಿಕ ಯಾವುದೋ ಅಜ್ಞಾತ ಸ್ಥಳದಲ್ಲಿ ಕೂಡಿ ಇಟ್ಟು ಪೆಟ್ರೋಲ್ ಸುರಿದು ಕೊಲೆ ಮಾಡಲಾಗಿದೆ. ಕೊಲೆ ಮಾಡಿ ಬಣಕ್ಕಲ್ ಎಂಬಲ್ಲಿ ಗುಡ್ಡದಲ್ಲಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.

ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್