ಬೆಂಗಳೂರು;ಭಾನುವಾರ ಸಂಜೆ ವೇಳೆ ಸುರಿದ ಭಾರಿ ಮಳೆಗೆ ಒಬ್ಬ ಯುವತಿ ಬಲಿಯಾಗಿರುವ ದುರ್ಘಟನೆ ನಡೆದಿದೆ.
ವಿಧಾನಸೌಧದಿಂದ 200 ಮೀಟರ್ ದೂರದಲ್ಲೇ ಇರುವ ಕೆ.ಆರ್. ವೃತ್ತದ ಬಳಿಯಿರುವ ಅಂಡರ್ಪಾಸ್ನಲ್ಲಿ ನಿಂತ ನೀರಿನಲ್ಲಿ ಕಾರು ಸಿಲುಕಿಕೊಂಡು ಮಹಿಳೆ ತೀವ್ರ ಅಸ್ವಸ್ಥಗೊಂಡಿದ್ದರು.ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಯುವತಿಯನ್ನು ಭಾನುರೇಖಾ (22) ಎಂದು ಗುರುತಿಸಲಾಗಿದೆ.
ಶಾಲೆಗೆ ರಜೆ ಇರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ 6 ಜನರ ಕುಟುಂಬ ಬೆಂಗಳೂರಿಗೆ ಪ್ರವಾಸಕ್ಕೆಂದು ಬಂದಿದ್ದರು. ಬೆಂಗಳೂರಿನ ರಸ್ತೆಗಳ ಪರಿಚಯ ಇಲ್ಲದ್ದರಿಂದ ಮಳೆಯ ನಡುವೆಯೇ ಗೂಗಲ್ ಮ್ಯಾಪ್ ತೋರಿಸಿದಂತೆ ಅಂಡರ್ಪಾಸ್ನಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಆದರೆ, ಅಂಡರ್ಪಾಸ್ನಲ್ಲಿ ಮಳೆಯ ನೀರು ತುಂಬಿಕೊಂಡಿದ್ದು, ಅಲ್ಲಿ ಹೋದ ಕಾರು ಸಂಪೂರ್ಣ ಮುಳುಗಿದೆ. ಅವರನ್ನು ಸ್ಥಳೀಯರು ರಕ್ಷಣೆ ಮಾಡಲು ಮುಂದಾಗಿದ್ದಾರೆ.
ಕಾರಿನೊಳಗೆ ಸಿಲುಕಿದ್ದ ಕುಟುಂಬವನ್ನು ಸ್ಥಳೀಯರು ನೀರಿಗೆ ನುಗ್ಗಿ ಕಾಪಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ನೀರು ಕುಡಿದ ಯುವತಿ ಉಸಿರಾಟಕ್ಕೆ ಸಮಸ್ಯೆ ಎದುರಾಗಿದೆ. ಅವರನ್ನು ಕುಡಲೇ ಹತ್ತಿರವಿದ್ದ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಆದರೆ, ಆಸ್ಪತ್ರೆ ಸಿಬ್ಬಂದಿ ಯುವತಿ ಸ್ಥಿತಿ ಗಂಭೀರವಾಗಿದ್ದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳುವಲ್ಲಿ ಮೊದಲು ನಿರಾಕರಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆಂಧ್ರಪ್ರದೇಶದಿಂದ ಪ್ರವಾಸಕ್ಕೆ ಆಗಮಿಸಿದ್ದ ಕುಟುಂಬದ ಯುವತಿ ಮೃತಪಟ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ, ಮೃತ ಯುವತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ