ಆಂಧ್ರಪ್ರದೇಶ; ಮಗು ಜನಿಸಿದ ದಿನವೇ ತಂದೆಯೋರ್ವ ಅಪಘಾತದಲ್ಲಿ ಮೃತಪಟ್ಟ ಘಟನೆ ಆಂಧ್ರದಲ್ಲಿ ನಡೆದಿದೆ.
ಕಾರಂಪುಡಿಯ ಬತ್ತಿನ ಆನಂದ್ ಅವರ ಪತ್ನಿ ರಾಮಾಂಜಿನಿ ತುಂಬು ಗರ್ಭಿಣಿಯಾಗಿದ್ದು, ಅವರಿಗೆ ಶುಕ್ರವಾರ ರಾತ್ರಿ ಹೊಟ್ಟೆನೋವು ಕಾಣಿಸಿಕೊಂಡಿತ್ತು. ರಾತ್ರಿ 9 ಗಂಟೆಗೆ ಆನಂದ ತನ್ನ ಪತ್ನಿಯನ್ನು ಆಶಾ ಕಾರ್ಯಕರ್ತೆಯರ ಜತೆ ಕಾರಂಪುಡಿ ಪಿಎಚ್ಸಿ(ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ) ಕರೆದುಕೊಂಡು ಹೋಗಿದ್ದರು. ಆದರೆ ಅಲ್ಲಿ ವೈದ್ಯರಿಲ್ಲದ ಕಾರಣ ಗುರಜಾಲ ಸರ್ಕಾರಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದರು.
108 ಆಂಬ್ಯುಲೆನ್ಸ್ ನಲ್ಲಿ 20 ಕಿ.ಮೀ ದೂರದ ಗುರಜಾಲ ಆಸ್ಪತ್ರೆಗೆ ಬಂದರು. ಇಲ್ಲಿ ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಮ್ನಿಯೋಟಿಕ್ ದ್ರವ ಕಡಿಮೆಯಾಗಿದ್ದು, ರಕ್ತಹೀನತೆ ಕಂಡು ಬಂದಿದ್ದರಿಂದ ಉತ್ತಮ ಚಿಕಿತ್ಸೆಗಾಗಿ ನರಸರಾವ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದರು.
ಪತಿ ಆನಂದ್ ಹೆಂಡತಿಯನ್ನು ನರಸರಾವ್ ಪೇಟೆ ಆಸ್ಪತ್ರೆಗೆ ಆಂಬ್ಯುಲೆನ್ಸ್ನಲ್ಲಿ ಕಳುಹಿಸಿ ತಾನು ದ್ವಿಚಕ್ರವಾಹನದಲ್ಲಿ ಹೊರಟಿದ್ದರು. ಆದರೆ ಮಾರ್ಗ ಮಧ್ಯೆ ಜೂಲಕಲ್ಲು ಎಂಬಲ್ಲಿ ರಸ್ತೆಯ ಗುಂಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.
ತಕ್ಷಣವೇ ಕಾರಂಪುಡಿಯಿಂದ ಆಂಬುಲೆನ್ಸ್ನಲ್ಲಿ ನರಸರಾವ್ಪೇಟೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರು ಮೃತಪಟ್ಟಿದ್ದಾರೆ.