ಮಂಗಳೂರು;ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಳೆ ದ.ಕ ಜಿಲ್ಲೆಗೆ ಆಗಮನದ ಹಿನ್ನೆಲೆ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.
ಕಣ್ಣೂರಿಗೆ ವಿಮಾನದ ಮೂಲಕ ಆಗಮಿಸುವ ಅಮಿತ್ ಶಾ ಅಲ್ಲಿಂದ ಹೆಲಿಕಾಪ್ಟರ್ನಲ್ಲಿ ಈಶ್ವರಮಂಗಲಕ್ಕೆ ಆಗಮಿಸಿ, ಹನುಮಗಿರಿಯಲ್ಲಿ ಭಾರತ ಮಾತಾ ಮಂದಿರ ಲೋಕಾರ್ಪಣೆ ಮಾಡಲಿದ್ದಾರೆ.ಬಳಿಕ ಕ್ಯಾಂಪ್ಕೊದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಂಗಳೂರಿನಲ್ಲಿ ಪಕ್ಷದ ಪ್ರಮುಖರ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಅಮಿತ್ ಶಾ ಭೇಟಿ ಹಿನ್ನೆಲೆ ಜಿಲ್ಲೆಯಲ್ಲಿ ಭಾರೀ ಭದ್ರತೆ ವ್ಯವಸ್ಥೆ ಮಾಡಲಾಗಿದೆ.ರಾಜ್ಯದ ನಾನಾ ಭಾಗದ 1,600 ಪೊಲೀಸ್ ಸಿಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.7 ಮಂದಿ ಎಸ್ಪಿ, 22 ಮಂದಿ ಡಿವೈಎಸ್ಪಿ, 38 ಮಂದಿ ಇನ್ಸ್ಪೆಕ್ಟರ್, 80ಕ್ಕೂ ಅಧಿಕ ಪಿಎಸ್ಐಗಳು ಕರ್ತವ್ಯ ನಿರ್ವಹಿಸಲಿದ್ದಾರೆ.
ಇದರ ಜತೆಗೆ ಪ್ಯಾರಾ ಮಿಲಿಟರಿ ಪೋರ್ಸ್, ಅಮಿತ್ ಶಾ ಅವರಿಗೆ ಎಸ್ಪಿಜಿ ಭದ್ರತೆ ಇರಲಿದೆ.ಹನುಮಗಿರಿ, ಮೊಟ್ಟೆತ್ತಡ್ಕ ಹೆಲಿಪ್ಯಾಡ್,ತೆಂಕಿಲ ಸಮಾವೇಶದ ಸ್ಥಳದಲ್ಲಿ ಬಿಗಿ ಭದ್ರತೆ ಮಾಡಲಾಗುತ್ತದೆ.
ಇದಲ್ಲದೆ ಸುಳ್ಯ, ಬೆಳ್ತಂಗಡಿ ಭಾಗದಲ್ಲಿ ನಕ್ಸಲ್ ಚಟುವಟಿಕೆ ಪ್ರದೇಶಗಳಲ್ಲೂ ಭಾರೀ ನಿಗಾ ವಹಿಸಲಾಗಿದೆ.ವಿವಿಧೆಡೆ ರಸ್ತೆ ಸಂಚಾರಕ್ಕೆ ತಡೆ ನೀಡಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.