ಬೆಂಗಳೂರು;ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ ಅಲೋಕ್ ಮೋಹನ್ ಅವರನ್ನು ನೇಮಿಸಲಾಗಿದೆ.
ಹಿರಿಯ ಅಧಿಕಾರಿಯಾಗಿದ್ದ ಅಲೋಕ್ ಮೋಹನ್ ಅವರನ್ನು ಪೊಲೀಸ್ ಮಹಾನಿರ್ದೇಶಕರ ಸ್ಥಾನಕ್ಕೆ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಅಲೋಕ್ ಮೋಹನ್ 1987ರ ಬ್ಯಾಚ್ ನ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಡಿಜಿಪಿ ಡಾ. ಅಲೋಕ್ ಮೋಹನ್ ಅವರು ಇದೀಗ ಡಿಜಿ-ಐಜಿಪಿಯಾಗಿ ನೇಮಕಗೊಂಡಿದ್ದಾರೆ.ಸೇವಾ ಜೇಷ್ಠತೆ ಆಧಾರದಲ್ಲಿ ಡಾ. ಅಲೋಕ್ ಮೋಹನ್ ಅವರನ್ನು ಸರಕಾರ ಡಿಜಿ-ಐಜಿ ಹುದ್ದೆಗೆ ನೇಮಿಸಿದೆ.ಈ ಹುದ್ದೆಗೆ ನಾಲ್ವರು ಹಿರಿಯ ಐಪಿಎಸ್ ಅಧಿಕಾರಿಗಳು ರೇಸ್ ನಲ್ಲಿದ್ದರು.
ಬಿಹಾರ ಮೂಲದ ಡಾ. ಅಲೋಕ್ ಮೋಹನ್, 1987ನೇ ಬ್ಯಾಚ್ ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ. 36 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಅವರು, ಹಾಲಿ ಅಗ್ನಿಶಾಮಕದಳ ಹಾಗೂ ತುರ್ತು ಸೇವೆಗಳ ಡಿಜಿಪಿಯಾಗಿದ್ದರು.
ಹಿಂದೆ ಕಾರಾಗೃಹ ಇಲಾಖೆ ಡಿಜಿಪಿ, ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಆಯುಕ್ತ, ಎಸಿಬಿ ಎಡಿಜಿಪಿ ಸೇರಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2025ರ ಏಪ್ರಿಲ್ ನಲ್ಲಿ ಅಲೋಕ್ ಮೋಹನ್ ನಿವೃತ್ತರಾಗಲಿದ್ದಾರೆ.
ಈ ಹಿಂದೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಪ್ರವೀಣ್ ಸೂದ್ ಕೇಂದ್ರ ಸರ್ಕಾರದ ಸೇವೆಗೆ ತೆರಳಿದ್ದರು.ಕೇಂದ್ರ ಸರ್ಕಾರ ಅವರನ್ನು ಸಿಬಿಐ ನಿರ್ದೇಶಕರಾಗಿ ನೇಮಕಗೊಳಿಸಿ ಆದೇಶಿಸಿತ್ತು.