ಸುಳ್ಯ:ಹೊಳೆ ನೀರಿಗೆ ಬಿದ್ದು ಜಿ.ಪಂ. ಮಾಜಿ ಸದಸ್ಯ, ಬಿಜೆಪಿ ಮುಖಂಡ ಸಾವನ್ನಪ್ಪಿದ್ದ ದಾರುಣ ಘಟನೆ ನಡೆದಿದೆ.
ಮೃತರನ್ನು ಮೇನಾಲದ ಬಿಜೆಪಿ ಮುಖಂಡ ನವೀನ್ ರೈ ಎಂದು ಗುರುತಿಸಲಾಗಿದೆ.
ನವೀನ್ ರೈಯವರ ಮನೆ ಮೇನಾಲದಲ್ಲಿದ್ದು, ಪಕ್ಕದಲ್ಲಿಯೇ ಕೃಷಿ ತೋಟವಿದೆ. ಅದರ ಇನ್ನೊಂದು ಪಾರ್ಶ್ವದಲ್ಲಿ ಪಯಸ್ವಿನಿ ಹೊಳೆಗೆ ನೀರಿನ ಪಂಪ್ ಅಳವಡಿಲಾಗಿದೆ. ಅಲ್ಲಿಗೆ ತುದಿಯಡ್ಕ ಮೂಲಕ ಸಾಗಬೇಕಾಗಿದೆ. ನವೀನ್ ರೈಯವರು ಆಗಾಗ ಇಲ್ಲಿಗೆ ಬಂದು ಹೋಗುತ್ತಿದ್ದರು.
ಇಂದು ಬೆಳಿಗ್ಗೆ 1೦.3೦ರ ವೇಳೆಗೆ ಗಿರಿಜಾಶಂಕರ್ ತುದಿಯಡ್ಕ ಅವರ ಮನೆಯ ಬಳಿ ಬೈಕ್ ನಿಲ್ಲಿಸಿ ಪುಟ್ವಾಲ್ನಲ್ಲಿರುವ ಕಸ ತೆಗೆಯಲೆಂದು ಅಲ್ಲಿಗೆ ಹೋಗಿದ್ದರು. ನದಿಯ ದಡದಲ್ಲಿ ಮೊಬೈಲ್, ವಾಚ್ ಮತ್ತಿತರ ಸಾಮಾನುಗಳನ್ನಿರಿಸಿ ನದಿಗಿಳಿದಿದ್ದರು. ಬಹಳ ಹೊತ್ತಾದರೂ ನವೀನ್ ರೈಯವರು ಮರಳಿ ಬಾರದ್ದರಿಂದ ಪರಿಸರದಲ್ಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರು ಗಿರಿಜಾಶಂಕರ್ರವರ ಪತ್ನಿಗೆ ವಿಷಯ ತಿಳಿಸಿದರು.
ಸುಳ್ಯದ ಸಭೆಯೊಂದರಲ್ಲಿದ್ದ ಗಿರಿಜಾಶಂಕರ್ರವರಿಗೆ ಪತ್ನಿ ಕೂಡಲೇ ಬರುವಂತೆ ಫೋನಾಯಿಸಿದರು. ಅದಾಗಲೇ ನವೀನ್ ರೈ ನಾಪತ್ತೆಯಾಗಿದ್ದರು.
ಸ್ಥಳಕ್ಕೆ ಬಂದ ಮುಳುಗು ತಜ್ಞರು ಹೊಳೆಗಿಳಿದು ಅರ್ಧ ಗಂಟೆ ಶೋಧ ನಡೆಸಿದಾಗ ಸ್ವಲ್ಪ ದೂರದ ಆಳದಲ್ಲಿ ನವೀನ್ ರೈಯವರ ಮೃತದೇಹ ಪತ್ತೆಯಾಯಿತು.